ಚನ್ನರಾಯಪಟ್ಟಣ(ದೇವನಹಳ್ಳಿ): ತಾಲ್ಲೂಕಿನ ಬೂದಿಗೆರೆ ಗ್ರಾಮದ ಸರ್ಲಿಂಗ್ ಶಾಲೆ ಆವರಣದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರಕವಿ ದ.ರಾ. ಬೇಂದ್ರೆ ಅವರ ಜನ್ಮದಿನೋತ್ಸವ ಆಚರಿಸಲಾಯಿತು.
ಬೇಂದ್ರೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಿವೃತ್ತ ಶಿಕ್ಷಕ ಶರಣಯ್ಯ ಹಿರೇಮಠ್ ಮಾತನಾಡಿ, ‘ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ರಚಿಸಿದ ಭಾವಗೀತೆಗಳು ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿವೆ’ ಎಂದು ಹೇಳಿದರು.
ಬೇಂದ್ರೆ ಅವರ ಸಾಹಿತ್ಯ ಹಾಗೂ ಆಡುವ ಭಾಷೆ ಒಂದೇ ಇರುತ್ತಿತ್ತು. ಜನರೊಂದಿಗೆ ಹೇಗೆ ಬೆರೆಯುತ್ತಿದ್ದರೊ ಹಾಗೆ ಬರೆಯುತ್ತಿದ್ದರು. ಅವರು ಎಲ್ಲರಿಗೂ ಆಪ್ತರಾಗಿದ್ದರು. ಆಡುಭಾಷೆಯನ್ನು ಅಕ್ಷರ ಮತ್ತು ಧ್ವನಿಗೆ ಇಳಿಸಿದ್ದು ಬೇಂದ್ರೆ ಅವರ ಹೆಗ್ಗಳಿಕೆ. ಬೇಂದ್ರೆ ಸಾಹಿತ್ಯ ಕೇವಲ ನವೋದಯ ಕಾಲಕ್ಕೆ ಸಲ್ಲುವುದಿಲ್ಲ ಎಂದು ಹೇಳಿದರು.
ಕಸಾಪ ಜಿಲ್ಲಾ ಸಹಕಾರ್ಯದರ್ಶಿ ಎಸ್. ರಮೇಶ್ ಕುಮಾರ್ ಮಾತನಾಡಿ, ದ.ರಾ. ಬೇಂದ್ರೆ ಅವರ ಸಮಗ್ರ ಸಾಹಿತ್ಯದಲ್ಲಿ ಧ್ವನಿ, ನೆಲೆ ಲೌಕಿಕ-ಅಲೌಕಿಕ ಸಂಗತಿಗಳು ಮೇಳೈಸಿವೆ. ಬೇಂದ್ರೆ ಅವರ ವಿಚಾರಧಾರೆಗಳು ಇಂದಿನ ಯುವಕರಿಗೆ ಮಾದರಿ. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು. ಶಾಲಾ ಮಕ್ಕಳು ಅವರ ವಿಚಾರ ಧಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಟರ್ಲಿಂಗ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಕೆ.ಬಿ. ಅಶೋಕ್, ಶಿಲ್ಪಕಲಾ, ಮಧುಸೂದನ್, ಬೂದಿಗೆರೆ ಗ್ರಾಮದ ಅಮಾನುಲ್ಲಾ, ಶಾಲಾ ಮುಖ್ಯ ಶಿಕ್ಷಕರಾದ ನಿರ್ಮಲಾ, ಶಾಂತ, ಶಿಕ್ಷಕರಾದ ಶಂಕರಯ್ಯ, ಮಂಗಳಗೌರಿ, ವಸಂತ್ ಕುಮಾರ್, ಆಂಜಿನಯ್ಯ, ಉಮಾರಾಣಿ, ಪ್ರಸನ್ನ, ರಾಧಾಮಣಿ ಇದ್ದರು.