ಚನ್ನರಾಯಪಟ್ಟಣ(ದೇವನಹಳ್ಳಿ): ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮಟ್ಟಿಬಾರ್ಲು ಗ್ರಾಮದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಗೆ ಭೂಮಿ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ಸ್ಥಳೀಯ ರೈತರು ತಡೆದು ಘೇರಾವ್ ಹಾಕಿ ವಾಪಸ್ ಕಳುಹಿಸಿದ್ದಾರೆ.
ಮಟ್ಟಿಬಾರ್ಲು ಗ್ರಾಮಕ್ಕೆ ಆಗಮಿಸಿದ್ದ ಖಾಸಗಿ ಕಂಪನಿಯ ಸರ್ವೆ ಅಧಿಕಾರಿಗಳು ಭೂಮಿ ಅಳತೆ ಮಾಡಲು ಮುಂದಾಗಿದ್ದಾರೆ. ಇದನ್ನು ಸ್ಥಳೀಯರು ಪ್ರಶ್ನಿಸಿದ್ದರು ಇಲ್ಲಿ ಪೈಪ್ಲೈನ್ ಕಾಮಗಾರಿ ಹಾಗೂ ರಸ್ತೆ ವಿಸ್ತರಣೆ ಮಾಡಬೇಕಿದೆ. ಆದ್ದರಿಂದ ಸರ್ವೆ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಹೆಚ್ಚು ಕೃಷಿಕರು ಜಮಾವಣೆಯಾದಗ ಸರ್ವೆ ಸಿಬ್ಬಂದಿ ಹಾಗೂ ರೈತರಿಗೆ ಮಾತಿನ ಚಕಮಕಿ ನೆಡೆಯಿತು.
ಯಾವ ಉದ್ದೇಶಕ್ಕೆ ಸರ್ವೆ ಮಾಡುತ್ತಿದ್ದೇವೆ ಎಂದು ನಿಮಗೆ ತಿಳಿಸುವ ಅಗತ್ಯತೆ ಇಲ್ಲ ಎಂದು ಉಡಾಫೆಯಿಂದ ವರ್ತಿಸಿದ್ದಾರೆ. ಇದರಿಂದ ಕೋಪಗೊಂಡ ರೈತರು ಕೆಲಸಕ್ಕೆ ಅಡಚಣೆ ಉಂಟು ಮಾಡಿದರು. ವಿಜಯಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸರ್ವೆ ಕಾರ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ಠಾಣೆಗೆ ತರುವಂತೆ ಸೂಚಿಸಿ. ಅವರ ಉಸ್ತುವಾರಿಗಳಿಗೆ ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ತಿಳಿಸಿದರು. ಬಳಿಕ ಸ್ಥಳದಿಂದ ಸರ್ವೆ ತಂಡ ನಿರ್ಗಮಿಸಿತು.
294 ದಿನಗಳಿಂದ ಧರಣಿ:ತಾಲ್ಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ಒಟ್ಟು 1777 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ನೀಡುವುದಿಲ್ಲ ಎಂದು ಪಟ್ಟು ಹಿಡಿದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲ ರೈತರು ಕಳೆದ 294 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಚನ್ನರಾಯಪಟ್ಟಣ, ಹ್ಯಾಡ್ಯಾಳ, ಚೀಮಾಚನಹಳ್ಳಿ, ಹರಳೂರು, ನಲ್ಲಪ್ಪನಹಳ್ಳಿ, ಎಸ್ ತೆಲ್ಲೋಹಳ್ಳಿ, ಪೋಲನಹಳ್ಳಿ, ಗೋಕರೆಬಚ್ಚೇನಹಳ್ಳಿ, ಮಟ್ಟಬಾರ್ಲು, ಪಾಳ್ಯ ಹಾಗೂ ನಾಗನಾಯಕನಹಳ್ಳಿ ಸೇರಿದಂತೆ 13 ಹಳ್ಳಿಗಳ ರೈತರು ಈ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಆದರೂ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಣೆ ಮಾಡಿಲ್ಲ ಎಂದು ಸ್ಥಳೀಯ ರೈತರು ಧಿಕ್ಕಾರ ಕೂಗಿದರು.
ಜ.26ರಂದು ಚನ್ನರಾಯಪಟ್ಟಣದಿಂದ ದೇವನಹಳ್ಳಿ ಪಟ್ಟಣದ ವರೆಗೂ 9.ಕಿ.ಮೀ ದೂರ ಕಾಲ್ನಡಿಗೆಯ ಮೂಲಕ ‘ಗಣತಂತ್ರದೆಡೆಗೆ ರೈತರ ನಡಿಗೆ‘ ಬ ಮೌನ ಮೆರವಣಿಗೆ ಹಮ್ಮಿಕೊಂಡಿರುವುದು ತಿಳಿದುಬಂದಿದ್ದು, ರಾಷ್ಟ್ರೀಯ ಹಬ್ಬಗಳ ಸಂಭ್ರಮಾಚರಣೆಗೆ ಕಳಂಕ ಹಾಗೂ ಶಾಂತಿಗೆ ಭಂಗ ತರುವ ಸಂಭವದ ಕಾರಣ ಒಂಬತ್ತು ರೈತ ಮುಖಂಡರಿಗೆ ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರು ಸಮನ್ಸ್ ಜಾರಿ ಮಾಡಿದ್ದಾರೆ.
ಜ.23ರ ಸೋಮವಾರ ಬೆಂಗಳೂರಿನ ಅಮೃತಹಳ್ಳಿ ಕಚೇರಿಗೆ ಖುದ್ದು ಹಾಜರಾಗಿ ಒಂದು ವರ್ಷದ ಅವಧಿಗೆ ಶಾಂತಿಪಾಲನೆಗೆ ಮುಚ್ಚಿಳಿಗೆ ಬರೆದುಕೊಟ್ಟು, ಓರ್ವ ವ್ಯಕ್ತಿಯ ಜಾಮೀನು ಭದ್ರತೆ ನೀಡಲು ಸೂಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.