ಸೂಲಿಬೆಲೆ: ಚುನಾವಣೆ ದಿನ ಸಮೀಪಿಸುತ್ತಿದೆ. ಸ್ವಾಭಿಮಾನಿ ಕಾರ್ಯಕರ್ತರು ಜನರ ಬಳಿ ಹೋಗಲು ಸಿದ್ಧರಾಗಬೇಕು ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಸಲಹೆ ನೀಡಿದರು.
ತೆನೆಯೂರು ಸೋಮೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ಯಾರ ಬಗ್ಗೆಯೂ ಅವಹೇಳನ ಮಾಡುವುದು ಬೇಡ. ಚುನಾವಣೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ನಂಬಿರುವ ಮತದಾರರು ಕೈಹಿಡಿಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಿಷ್ಠೆಯಲ್ಲಿ ಅನ್ಯಾಯವಾಗಿದೆ. ಕ್ಷೇತ್ರದ ಕಾರ್ಯಕರ್ತರ ಯಾವುದೇ ಅಭಿಪ್ರಾಯ, ಅನಿಸಿಕೆ ಕೇಳದೆ ಏಕಾಏಕಿ ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬೇರೊಬ್ಬರಿಗೆ ಟಿಕೆಟ್ ನೀಡಿರುವುದು ಖಂಡನೀಯ ವಿಚಾರ ಎಂದು ಪರೋಕ್ಷವಾಗಿ ಎಂಟಿಬಿ ನಾಗರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾಭಿಮಾನಿಯಾಗಿ ತಾಲ್ಲೂಕಿನ ಅಸ್ತಿತ್ವಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ತಾಲ್ಲೂಕಿನ ಎಲ್ಲ ಸಮುದಾಯ ಜನರ ಆಶೀರ್ವಾದ ಅಗತ್ಯವಿದೆ ಎಂದರು.
ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಹೊಸಕೋಟೆ ಟಿಎಪಿಸಿಎಂಎಸ್ ಉಪಾಧ್ಯಕ್ಷ ಗೋಪಾಲಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಭುವನಹಳ್ಳಿ ಗೋಪಾಲಪ್ಪ, ಬಿ.ವಿ.ರಾಜಶೇಖರಗೌಡ ಇದ್ದರು.