‘ಇದು ಸಂವಿಧಾನಬಾಹಿರ ಚುನಾವಣೆಯಾಗಿದೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿ. ಜಯರಾಜ್ ಆರೋಪಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಬಳಿ ಚುನಾವಣೆ ವಿರೋಧಿಸಿ ನಡೆದ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಚುನಾವಣೆಯ ಮತದಾರರ ಪಟ್ಟಿಯಲ್ಲಿ ಈಗಾಗಲೇ ಮರಣ ಹೊಂದಿ ಹತ್ತು ವರ್ಷಗಳಾಗಿರುವ ಷೇರುದಾರರ ಹೆಸರನ್ನು ಸಹ ಸೇರಿಸಲಾಗಿದೆ ಆದರೆ, ಪ್ರತಿವರ್ಷ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಿರುವ ಷೇರುದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ದೂರಿದರು.
ಇದೊಂದು ಸಂವಿಧಾನ ವಿರೋಧಿ ಚುನಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದೇವೆ. ಕಳೆದ ಒಂದು ವರ್ಷದ ಹಿಂದೆ ನಡೆದ ನಗರಸಭೆ ಮತ್ತು ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಬಾರಿ ಬಹುಮತದಿಂದ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಚುನಾವಣೆಯನ್ನು ಸೋಲಿನ ಭೀತಿಯಿಂದ ಬಹಿಷ್ಕರಿಸಿಲ್ಲ. ಬದಲಾಗಿ ಈ ರೀತಿಯ ಅಕ್ರಮದ ಚುನಾವಣೆಗಳಲ್ಲಿ ನಾವು ಭಾಗವಹಿಸಬಾರದೆಂದು ಚುನಾವಣೆಯಿಂದ ಹಿಂದೆ ಸರಿದಿದ್ದೇವೆ ಎಂದು ತಿಳಿಸಿದರು.
ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ನೀಡುತ್ತಿದ್ದ ವೇಳೆಯಲ್ಲಿ ಚುನಾವಣಾಧಿಕಾರಿ ಸೇರಿದಂತೆ ಸಿಬ್ಬಂದಿಯನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಅವರು ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸತೀಶ್, ನಗರಸಭಾ ಸದಸ್ಯರಾದ ನಿತಿನ್ ಶ್ರೀನಿವಾಸ್, ನವೀನ್ ಕುಮಾರ್, ಅರುಣ್ ಕುಮಾರ್, ಟೌನ್ ಬ್ಯಾಂಕ್ ಉಪಾಧ್ಯಕ್ಷ ಬಾಲಚಂದ್ರ, ಸದಸ್ಯರಾದ ಜಿ.ಟಿ. ಮೋಹನ್ ಕುಮಾರ್ ಪಾಲ್ಗೊಂಡಿದ್ದರು.