ದೊಡ್ಡಬಳ್ಳಾಪುರ: ನಗರದಲ್ಲಿ ನವೋದಯ ವಿದ್ಯುತ್ ಚಾಲಿತ ಮಗ್ಗಗಳ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ಹಾಗೂ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ರಕ್ತ ನಿಧಿಯಿಂದ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಈ ಬಗ್ಗೆ ಮಾಹಿತಿ ನೀಡಿದ ನವೋದಯ ವಿದ್ಯುತ್ ಚಾಲಿತ ಮಗ್ಗಗಳ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ಹೇಮಂತರಾಜ್, ‘ನೇಕಾರರ ಪರವಾಗಿ ಕೆಲಸ ಮಾಡುತ್ತಿರುವ ಸಂಘವು ಸಾಮಾಜಿಕ ಸೇವಾ ಕೆಲಸಗಳಲ್ಲೂ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ವಾರ್ಷಿಕೋತ್ಸವ ಸಂದರ್ಭದಲ್ಲೂ ರಕ್ತದಾನ ಶಿಬಿರವನ್ನು ನಡೆಸುತ್ತ ಬಂದಿದ್ದೇವೆ. ನೆಯ್ಗೆಯಲ್ಲಿ ತೊಡಗಿಸಿಕೊಂಡಿರುವ ಬಹುತೇಕ ನೇಕಾರರು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುತ್ತಾರೆ. ಇದರಿಂದ ರಕ್ತದ ಅಗತ್ಯ ಇರುವವರಿಗೆ ಅನುಕೂಲವಾಗಲಿದೆ’ ಎಂದರು.
ಸಂಘದ ಪದಾಧಿಕಾರಿಗಳಾದ ಎನ್.ಲೋಕೇಶ್, ಈಶ್ವರಯ್ಯ, ಉಜ್ಜನಿ ನಾರಾಯಣಪ್ಪ, ರಮೇಶ್, ನಾರಾಯಣಪ್ಪ, ಸಂಜೀವಪ್ಪ, ಕೆ.ಸಿ.ಜನರಲ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಡಾ.ಶಾಂತ ಹೊಸಮನಿ, ಕೆನರಾ ಬ್ಯಾಂಕ್ ನಗರ ಶಾಖಾ ವ್ಯವಸ್ಥಾಪಕ ಮಲ್ಯ ಇದ್ದರು.