ಹೊಸಕೋಟೆ: ಇಲ್ಲಿನ ಗಾಯತ್ರಿ ವಿದ್ಯಾ ಮಂದಿರ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ಭಾರತ ಸರ್ಕಾರದ ಭವಿಷ್ಯ ನಿಧಿ ಸದಸ್ಯರಾದ ವಿಜಯಕುಮಾರ್ ವಿತರಿಸಿದರು.
ಅನಂತರ ಮಾತನಾಡಿದ ಅವರು, ‘ಈ ಶಾಲೆಗೆ ಬರುವ ಮಕ್ಕಳು ಶಾಲೆಯ ಕನಿಷ್ಠ ಶುಲ್ಕವನ್ನು ಸಹಿತ ಕಟ್ಟಲು ಆಗುವುದಿಲ್ಲ, ಅಂತಹ ಮಕ್ಕಳಿಗೆ ಕಳೆದ 33 ವರ್ಷಗಳಿಂದ ಶಾಲೆ ನಡೆಸುತ್ತಿರುವ ಶಾಲಾ ಮಂಡಲಿಯವರು ವಿವಿಧ ಕಡೆಗಳಿಂದ ದೇಣಿಗೆ ತಂದು ಶಾಲೆ ನಡೆಸುತ್ತಿದ್ದು ಕನ್ನಡ ಮಾಧ್ಯಮದ ಶಾಲೆ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.
‘ತಮ್ಮ ತಾತನವರ ಸ್ಮರಣಾರ್ಥ ಕಳೆದ 9 ವರ್ಷಗಳಿಂದ ಎಲ್ಲ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸುತ್ತಿದ್ದು ಮುಂದಿನ ವರ್ಷಗಳಲ್ಲಿಯೂ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು. ಸಮಾಜದಲ್ಲಿರುವ ಅನುಕೂಲಸ್ಠರು ಇಂತಹ ಶಾಲೆಗಳಿಗೆ ಸಹಾಯ ಮಾಡುವಂತೆ’ ಮನವಿ ಮಾಡಿದರು.
ನಗರಸಭೆಯ ಸದಸ್ಯ ಮುನಿನಂಜಪ್ಪ, ಶಾಲಾ ಗೌರವ ಅಧ್ಯಕ್ಷ ಪಿ.ಎಸ್. ಮಂಜುನಾಥ್, ಕಾರ್ಯದರ್ಶಿ ಚಂದ್ರಪ್ಪ, ಸಮಾಜ ಸೇವಕ ಬಿಸೇಗೌಡ, ಮುಖ್ಯ ಶಿಕ್ಷಕ ನಟರಾಜ್ ಹಾಗೂ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.