ಹೊಸಕೋಟೆ: ‘ರೈತರ ಪರವಾಗಿ ಹೋರಾಟ ಮಾಡುತ್ತಿರುವವರನ್ನು ಈ ದೇಶದ ಪ್ರಧಾನ ಮಂತ್ರಿ ಮೋದಿ ಅವರು ದಲ್ಲಾಳಿಗಳು ಎಂದಿರುವುದು ನಿಜಕ್ಕೂ ನೋವಿನ ವಿಷಯ’ ಎಂದು ಸಿಐಟಿಯು ಸಂಘಟನೆಯ ಮುಖಂಡ ಹರೀಂದ್ರ ತಿಳಿಸಿದರು.
‘ನಾವು ದಲ್ಲಾಳಿಗಳಲ್ಲ. ಬದಲಾಗಿ ಪ್ರಧಾನ ಮಂತ್ರಿಗಳೇ ವಿದೇಶಿ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರು ನಗರದ ತಾಲ್ಲೂಕು ಕಚೇರಿ ಬಳಿ ನಡೆದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು. ಪ್ರತಿಭಟನೆ ಮಾಡುವುದು ಈ ದೇಶದ ನಾಗರಿಕರ ಹಕ್ಕು. ಆದರೆ ಇಲ್ಲಿನ ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸಿ ನಮಗೆ ಪ್ರತಿಭಟನೆ ನಡೆಸಲು ಅವಕಾಶ ನೀಡದೆ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ರೈತ ತಾನು ಬೆಳೆದ ಬೆಳೆಯನ್ನು ಎಪಿಎಂಸಿ ಮೂಲಕ ಮಾರುತ್ತಿದ್ದ. ಆದರೆ ಈಗಿನ ನೂತನ ಕಾನೂನಿನಲ್ಲಿ ಎಪಿಎಂಸಿಗಳೇ ರದ್ದಾದರೆ ನಾವು ಬೆಳೆಯನ್ನು ಎಲ್ಲಿ ಮಾರುವುದು? ಅಲ್ಪಸ್ವಲ್ಪ ಭೂಮಿಯಿರುವ ರೈತರು ತಮ್ಮ ಬೆಳೆಗಳನ್ನು ಸರಿಯಾದ ಬೆಲೆಗೆ ಮಾರಲಾಗದೆ ಕಂಗಾಲಾಗುತ್ತಾರೆ’ ಎಂದರು.
‘ತಮ್ಮ ಕೃಷಿ ಜಮೀನುಗಳನ್ನು ವಿದೇಶಿ ಕಂಪನಿಗಳಿಗೆ ಗುತ್ತಿಗೆ ನೀಡಿ ನಾವು ನಮ್ಮದೇ ಭೂಮಿಯಲ್ಲಿ ಕೂಲಿಗೆ ಹೋಗಬೇಕಾದ ಪರಿಸ್ಥಿತಿಯನ್ನು ತರುವ ನೂತನ ಕೃಷಿ ನೀತಿಯನ್ನು ಕೂಡಲೇ ಕೇಂದ್ರ ಸರ್ಕಾರ ಕೈಬಿಡಬೇಕು ಎಂದರು. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತಂದರೆ ಅದರಿಂದ ರೈತರಿಗೆ ಅನುಕೂಲವಾಗುತ್ತದೆ’ ಅದಕ್ಕಾಗಿ ಕೂಡಲೇ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವಂತೆ ಆಗ್ರಹಿಸಿದರು.
‘ದೇಶವು ಕೊರೊನಾ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಸಮಸ್ಯೆಗೆ ಒಳಗಾಗಿರುವುವರಿಗೆ ಸ್ಪಂದಿಸಲಿಲ್ಲ. ಬದಲಾಗಿ ಇದೇ ಸಮಯಯನ್ನು ಉಪಯೋಗಿಸಿ ದೇಶ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ ಕಾನೂನುಗಳನ್ನು ಸುರ್ಗೀವಾಜ್ಞೆಯ ಮೂಲಕ ಜಾರಿಗೆ ತಂದು ದೇಶದ ಜನರನ್ನು ವಂಚಿಸಿದೆ’ ಎಂದರು.
‘ಈ ರೀತಿಯ ಕಾನೂನುಗಳನ್ನು ತರುತ್ತಿರುವ ಸರ್ಕಾರಗಳ ವಿರುದ್ದ ದೇಶದ ಜನತೆ ಬೇಸತ್ತಿದ್ದು ಈಗ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೀತಿ ಬದಲಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ‘ಕೆಂಚೇಗೌಡ ದೇಶದಲ್ಲಿ ಯಾವುದೇ ಕಾನೂನು ಜಾರಿಯಾಗಬೇಕಾದರೆ ಅದನ್ನು ಸಾರ್ವಜನಿಕವಾಗಿ ಚರ್ಚಿಸಿ ಸಾಧಕ ಭಾಧಕಗಳ ಬಗ್ಗೆ ವಿಮರ್ಶಿಸಬೇಕಾಗುತ್ತದೆ. ಆದರೆ ಈಗಿನ ಕೇಂದ್ರ ಸರ್ಕಾರ ತನ್ನ ಇಷ್ಠದಂತೆ ಕಾನೂನುಗಳನ್ನು ಮಾಡುತ್ತಿದೆ’ ಎಂದರು.
ಎಪಿಎಂಸಿ ಸದಸ್ಯ ಸಿ. ಮುನಿಯಪ್ಪ ಮಾತನಾಡಿ, ‘ರೈತರ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಂಡ ರಾಜ್ಯದ ಮುಖ್ಯಮಂತ್ರಿ ಈಗ ರೈತರ ಹಿತಕ್ಕೆ ಮಾರಕವಾಗಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿರುವ ಎಪಿಎಂಸಿಗಳನ್ನು ರದ್ದುಮಾಡಿ ನೇರವಾಗಿ ವಿದೇಶಿ ಕಂಪನಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದರು.
‘ಇನ್ನು ಮುಂದೆ ಚಿಲ್ಲರೆ ವ್ಯಾಪಾರದಲ್ಲಿಯೂ ವಿದೇಶಿ ಕಂಪನಿಗಳು ಬಂದರೆ ನಮ್ಮ ವ್ಯಾಪಾರಸ್ಥರು ಬೀದಿಗೆ ಬರಬೇಕಾಗುತ್ತದೆ’ ಎಂದರು.
ಸಭೆಯನ್ನು ಉದ್ದೇಶಿಸಿ ಕರ್ನಾಟಕ ಸಮತಾ ಸೈನಿಕ ದಳದ ಮುಖಂಡ ಮುನಿಕೃಷ್ಣಪ್ಪ, ಮನೋಹರ್, ದಲಿತ ನಾಯಕ ಶಂಕರ್, ಹಾಗೂ ಇತರರು ಮಾತನಾಡಿದರು.
ಸಭೆಯಲ್ಲಿ ಮೋಹನ್ ಬಾಬು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಕಾರ್ಖಾನೆಗಳ ಕಾರ್ಮಿಕರು ಹಾಗೂ ಇತರರು ಭಾಗವಹಿಸಿದ್ದರು. ಸಭೆಗೆ ಮುನ್ನ ನಗರದ ರಸ್ತೆಗಳಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
ನೀರಸ ಪ್ರತಿಕ್ರಿಯೆ: ಇಂದಿನ ಕರ್ನಾಟಕ ಬಂದ್ಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸರ್ಕಾರಿ ಕಚೇರಿಗಳು ಬ್ಯಾಂಕ್ ಗಳು ಎಂದಿನಂತೆ ಕಾಯ್ ನಡೆಸಿದರು. ಕೊನೆಯ ಸೋಮವಾರದ ಕಾರಣ ಸಹಜವಾಗಿ ದಿನಸಿ ಅಂಗಡಿಗಳು ಮತ್ತು ಇತರ ಅಂಗಡಿಗಳು ತಿಂಗಳ ರಜೆ ಮಾಡಿದ್ದು ಬಿಟ್ಟರೆ ಉಳಿಕೆ ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ಮುಚ್ಚಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.