ದೇವನಹಳ್ಳಿ: ಚಾಲಕನ ಅಜಾಗರೂಕತೆಯಿಂದ ನೀರಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದ ರಾಜ್ಯ ರಸ್ತೆ ಸಾರಿಗೆ ಬಸ್ ನಂತರ ರಸ್ತೆ ವಿಭಜಕಕ್ಕೂ ಡಿಕ್ಕಿ ಹೊಡೆದು 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಸಣ್ಣೇಗೇಟ್ ಬಳಿ ಈ ಘಟನೆ ನಡೆದಿದೆ.
ಪ್ರಯಾಣಿಕರಾದ ವೆಂಕಟೇಶ್, ಪವಿತ್ರ, ವಿಜಯಕುಮರ್, ಹರಿಪ್ರಸಾದ್, ಹೇಮಾವತಿ, ಲಕ್ಷ್ಮಿ, ಪ್ರಸಾದ್, ಶಾಹಿದಾ, ಶೃತಿ, ಸುನೀಲ್, ನಾಗರಾಜ್, ರೋಷಿಣಿ, ಚಾಲಕ ಮುನಿರಾಜ್ಗೆ ಗಾಯಗೊಂಡಿದ್ದು ನಗರದ ಲೀನಾರಾಮಯ್ಯ ಮತ್ತು ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮಾತನಾಡಿ, ಬಸ್ ಚಾಲಕ ಮುನಿರಾಜು ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದೇ ಘಟನೆಗೆ ಕಾರಣವಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.