ದೊಡ್ಡಬಳ್ಳಾಪುರ: ರಾಜ್ಯದಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರಗಳ ಅಭಿವೃದ್ಧಿಗೆ ಮೊದಲ ಹಂತದಲ್ಲಿ ₹10 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಆನಿಬಿಸೆಂಟ್ ಪಾರ್ಕ್ನಲ್ಲಿ ಐದು ದಿನಗಳ ಕಾಲ ನಡೆಯುವ 28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ ಜಾಂಬೋರೇಟ್ ಅನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ಸ್– ಗೈಡ್ಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ದಾವಣಗೆರೆ, ಉಡುಪಿ, ಹಾಗೂ ದೊಡ್ಡಬಳ್ಳಾಪುರದಲ್ಲಿನ ತರಬೇತಿ ಕೇಂದ್ರಗಳಿಗೆ ಉತ್ತಮ ಸೌಲಭ್ಯ ನೀಡಲಾಗುವುದು ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನವದೆಹಲಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಡಾ.ಅನಿಲ್ಕುಮಾರ್ ಜೈನ್ ಮಾತನಾಡಿ, ರಾಜ್ಯ ಸರ್ಕಾರ ಅತಿಥ್ಯ ವಹಿಸುವುದಾದರೆ ಅಂತರರಾಷ್ಟ್ರೀಯ ಜಾಂಬೋರೇಟ್ ನಡೆಸಲು ಅವಕಾಶ ನೀಡುವ ಬಗ್ಗೆ ಪ್ರಧಾನಿ ಜತೆ ಮಾತನಾಡುವುದಾಗಿ ತಿಳಿಸಿದರು.
ಸಚಿವರಾದ ಎಸ್.ಸುರೇಶ್ಕುಮಾರ್, ಸಿ.ಟಿ.ರವಿ, ಭಾರತ್ ಸ್ಕೌಟ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಅಂಚೆ ಇಲಾಖೆ ವತಿಯಿಂದ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಾಯಿತು. ಭಾರತೀಯ ಸೇನಾ ಪಡೆಯ ಎ.ಎಸ್.ಬ್ಯಾಂಡ್ ತಂಡದಿಂದ ವಾದ್ಯಗೋಷ್ಠಿ, ಬೈಕ್ ಸಾಹಸ ಪ್ರದರ್ಶನ, ಚಂದಾಪುರದ ಸುರಾನ ಅಂತರರಾಷ್ಟ್ರೀಯ ನೃತ್ಯ ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.