ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊಡಿಗೇಹಳ್ಳಿ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಂದ ನಗರದ ರೋಜಿಪುರದ ಆಂಜನೇಯಸ್ವಾಮಿ ದೇಗುಲದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರಸಭೆ ಸದಸ್ಯ ಆರ್. ಕೆಂಪರಾಜು ಮಾತನಾಡಿ, ನಗರಸಭೆ ಸ್ವಚ್ಛತೆಗೆ ಒತ್ತು ನೀಡುತ್ತಿದೆ. ಆದರೆ ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ಇದು ಅಸಾಧ್ಯವಾಗಿದ್ದು, ಎಲ್ಲರಿಗೂ ಅದರ ಬಗ್ಗೆ ಅರಿವಿರಬೇಕು ಎಂದರು.
ಸ್ವಚ್ಛತೆ ವಿಚಾರದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಅದರ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು. ನಗರಸಭೆಯ ಕಸ ಸಂಗ್ರಹ ಮಾಡುವ ಪೌರ ಕಾರ್ಮಿಕರು ಬಂದಾಗ ಹಸಿಕಸ– ಒಣಕಸ ವಿಂಗಡಿಸಿ ಕೊಡಬೇಕು. ಯೋಜನೆಯ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ ಎಂದರು.
ಯೋಜನೆಯ ಮೇಲ್ವಿಚಾರಕರಾದ ಗಿರೀಶ್, ಒಕ್ಕೂಟದ ಅಧ್ಯಕ್ಷೆ ಯಾಸ್ಮಿನ್, ಸೇವಾ ಪ್ರತಿನಿಧಿ ದಾಕ್ಷಾಯಿಣಿ ಭಾಗವಹಿಸಿದ್ದರು.