ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಪರಿಹಾರ ನಿಧಿ ಸದ್ಬಳಕೆ ಮಾಡಿ: ಶಾಸಕ

Last Updated 26 ಅಕ್ಟೋಬರ್ 2018, 13:30 IST
ಅಕ್ಷರ ಗಾತ್ರ

ದೇವನಹಳ್ಳಿ: ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೀಡಿರುವ ಹಣವನ್ನು ವಿವಿಧ ರೋಗಗಳಿಂದ ಬಳಲುತ್ತಿರುವ ರೋಗಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಉಗನವಾಡಿ ಗ್ರಾಮದ ಕೆ.ಪ್ರಭು ಎಂಬುವರಿಗೆ ಪರಿಹಾರ ನಿಧಿಯ ಚೆಕ್‌ ವಿತರಿಸಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 86 ಅರ್ಹರಿಗೆ ಒಟ್ಟು ₹26 ಲಕ್ಷ ಮೌಲ್ಯದ ಮೊತ್ತ ಚೆಕ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಚನ್ನಹಳ್ಳಿಯ ಶೃತಿಕ ಅವರಿಗೆ ₹1.5 ಲಕ್ಷ, ಅಕ್ಕುಪೇಟೆ ರಾಹುಲ್‌ರಿಗೆ ₹40 ಸಾವಿರ, ಬಿಜ್ಜವಾರ ಗಾಯಿತ್ರಿ ಅವರಿಗೆ ₹9,556, ಕಾಮೇನಹಳ್ಳಿಯ ಈಶ್ವರಪ್ಪ ಅವರಿಗೆ ₹39,995, ಉಗನವಾಡಿ ಕೆ.ಪ್ರಭು ಅವರಿಗೆ ₹22,219ದ ಚೆಕ್‌ ವಿತರಣೆ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಒಟ್ಟು 386 ಅರ್ಜಿಗಳು ಸಲ್ಲಿಕೆಯಾಗಿವೆ. ವಿವಿಧ ರೋಗಗಳಿಗೆ ವೆಚ್ಚ ಮಾಡಲಾಗಿರುವ ಬಿಲ್‌ಗಳನ್ನು ಮಾನದಂಡವನ್ನಾಗಿಸಿ ಹಣ ವಿತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ನಕಲಿ ಬಿಲ್‌ಗಳಿಗೆ ಅವಕಾಶವಿಲ್ಲ ಎಂದರು.

ಸರ್ಕಾರ ಈಗಾಗಲೇ ಕರ್ನಾಟಕ ಆರೋಗ್ಯ ಕಾರ್ಡ್ ಅಭಿಯಾನ ಆರಂಭಿಸಿದೆ. ₹2.5 ಲಕ್ಷದವರೆಗಿನ ವೈದ್ಯಕೀಯ ವೆಚ್ಚ ನೇರವಾಗಿ ಆಸ್ಪತ್ರೆಗಳಿಗೆ ಸರ್ಕಾರ ಕಳುಹಿಸುತ್ತದೆ. ಈ ಪ್ರಕ್ರಿಯೆ ಆರಂಭಗೊಂಡರೆ ಪರಿಹಾರ ನಿಧಿಗಾಗಿ ಸಲ್ಲಿಸುವ ಆರ್ಜಿಗಳು ಕಡಿಮೆಯಾಗಲಿವೆ ಎಂದರು.

ಬಮೂಲ್ ಉಪಾಧ್ಯಕ್ಷ ಬಿ.ಶ್ರೀನಿವಾಸ್, ಹಾಪ್ ಕಾಮ್ ಉಪಾಧ್ಯಕ್ಷ ಬಿ.ಮುನೇಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಜೆಡಿಎಸ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ಕಸಬಾ ಹೋಬಳಿ ಜೆಡಿಎಸ್ ಘಟಕ ಅಧ್ಯಕ್ಷ ಚಿಕ್ಕ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT