ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯಸ್ಥೆ ಕಾಪಾಡಲು ಎಲ್ಲರ ಸಹಕಾರ ಮುಖ್ಯ

Last Updated 8 ನವೆಂಬರ್ 2019, 10:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಇದಕ್ಕೆ ಧಕ್ಕೆ ಬರುವ ರೀತಿಯಲ್ಲಿ ಯಾರೇ ನಡೆದುಕೊಂಡರು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಹೇಳಿದರು.

ಅವರು ಗುರುವಾರ ನಗರದ ಗುರುರಾಜ ಕಲ್ಯಾಣ ಮಂದಿರದಲ್ಲಿ ನಡೆದ ವಿವಿಧ ಸಮುದಾಯದ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡುವ ಮೂಲಕ ಸಮಾಜದಲ್ಲಿ ಅಶಾಂತಿಗೆ ಮುಂದಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಮೊಬೈಲ್‌ ಬಳಕೆದಾರರು ತಮ್ಮ ವಾಟ್ಸ್ಆ್ಯಪ್‌, ಫೇಸ್‌ಬುಕ್‌ಗಳಿಗೆ ಸುಳ್ಳು ಸುದ್ದಿಗಳು ಹರಿದು ಬಂದರೆ ತಕ್ಷಣ ಪೊಲೀಸ್‌ ಠಾಣೆಗೆ ದೂರು ನೀಡಿ. ಸಾರ್ವಜನಿಕವಾಗಿ ಯಾವುದೇ ಹಬ್ಬ, ಆಚರಣೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಆಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖರ ಪಟ್ಟಿಯನ್ನು ಪೊಲೀಸ್ ಠಾಣೆಗೆ ನೀಡುವ ಮೂಲಕ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಎಲ್ಲಾ ಸಮುದಾಯದ ಧಾರ್ಮಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಕಳ್ಳತನಗಳನ್ನು ತಡೆಯಲು ಹಾಗೂ ಕಾನೂನು ತೊಡಕುಗಳು ಬಂದ ಸಂದರ್ಭದಲ್ಲೂ ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದರು.

ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದಿಂದ ನ. 12ರಂದು ನಗರದಲ್ಲಿ ಒನಕೆ ಓಬವ್ವ ಪಡೆ, ನಾಗರಿಕ ಬಂದೂಕು ತರಬೇತಿ, ಟ್ರಾಫಿಕ್ ವಾರ್ಡನ್, ವಾಲ್ ಆಫ್ ಯೂನಿಟಿ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

‘ದೇಶದ ಅಥವಾ ವಿಶ್ವದ ಯಾವುದೋ ಭಾಗದಲ್ಲಿ ನಡೆಯುವ ಘಟನೆಗಳಿಗೆ ಇಲ್ಲಿ ಪ್ರತಿಕ್ರಿಯೆ ನೀಡುವುದು ತಪ್ಪು. ಪೊಲೀಸ್ ಇಲಾಖೆಗೆ ಸರ್ವರೂ ಸಮಾನರು. ಈದ್‌ಮಿಲಾದ್, ರಾಮಜನ್ಮ ಭೂಮಿ ವಿವಾದದ ತೀರ್ಪು ಬರಬಹುದಾದ ಹಿನ್ನೆಲೆ ಎಲ್ಲರು ಒಟ್ಟಾಗಿ ನ್ಯಾಯಾಲಯದ ತೀರ್ಪನ್ನು ಗೌರವಿಸುವ ಮೂಲಕ ಶಾಂತಿ ಕಾಪಾಡಬೇಕಿದೆ’ ಎಂದರು.

ನ 11ರ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಏಕಮುಖ ವಾಹನ‌ ನಿಲುಗಡೆಗೆ ಕಾರ್ಯಾರಂಭ ಮಾಡುತ್ತಿದ್ದು ಸಾರಿಗೆ ನಿಯಮದ ಕುರಿತು ಜಾಗೃತಿ ಮೂಡಿಸಲಾಗಿದೆ. ಮುಂದಿನ ಹಂತ ನಿಯಮ ಉಲ್ಲಂಘಿಸಿದರೆ ದಂಡ ಅನಿರ್ವಾರ್ಯ ಎಂದು ಎಚ್ಚರಿಸಿದರು.

ಡಿವೈಎಎಸ್‌ಪಿ ಟಿ.ರಂಗಪ್ಪ ಮಾತನಾಡಿ, ‘ಎಲ್ಲಾ ಧರ್ಮಗಳು ಸಮಾಜಕ್ಕೆ ಶಾಂತಿಯನ್ನು ಬೋಧಿಸಿವೆ. ಆದರೆ ಕೆಲ ಕಿಡಿಗೇಡಿಗಳು ಹುಚ್ಚು ಕಲ್ಪನೆಯಿಂದ ವೈಮನಸ್ಯ ಸೃಷ್ಟಿಸಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿವೆ. ಸಾಮಾಜಿಕ ಜಾಲತಾಣವನ್ನು ನಾಗರಿಕರು ಎಚ್ಚರಿಕೆಯಿಂದ ಬಳಸಬೇಕು, ಯಾವುದೇ ಸಂಗತಿಯನ್ನು ವಿಮರ್ಶಿಸಿ ತಿಳಿದುಕೊಂಡ ನಂತರವೇ ಅದಕ್ಕೆ ಪ್ರತಿಕ್ರಿಯಿಸಬೇಕೇ ಹೊರತು ಭಾವಾವೇಶಕ್ಕೆ ಒಳಗಾಗಬಾರದು’ ಎಂದರು.

ತಹಶೀಲ್ದಾರ್ ಟಿ.ಎಸ್‌.ಶಿವರಾಜ್‌, ಸರ್ಕಲ್ ಇನ್‌ಸ್ಪೆಕ್ಟರ್‌ ರಾಘವ ಎಸ್.ಗೌಡ, ವಿಜಯಪುರ ಸರ್ಕಲ್ ಇನ್‌ಸ್ಪೆಕ್ಟರ್‌ ಪ್ರಕಾಶ್, ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಕೆ.ವೆಂಕಟೇಶ್, ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಗಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT