ದೊಡ್ಡಬಳ್ಳಾಪುರ: ‘ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದ ಸಿ.ಎಂ. ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು. ಅವರೇನು ಅಸ್ಪೃಶ್ಯರೆ’ ಎಂದು ಪ್ರಶ್ನಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಛಲವಾದಿ ಮಹಾಸಭಾ ಮಂಗಳವಾರ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ.
‘ಅಸ್ಪೃಶ್ಯತೆ ಶಬ್ದ ಬಳಸುವ ಮೂಲಕ ಕುಮಾರಸ್ವಾಮಿ ಅವರು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಎಸ್.ಸಿ, ಎಸ್.ಟಿ ವಿರುದ್ಧದ ದೌರ್ಜನ್ಯತಡೆ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಹಾಸಭಾ ದೂರಿನಲ್ಲಿ ಹೇಳಿದೆ.
‘ಛಲವಾದಿ ಮಹಾಸಭಾ ಮುಖಂಡರಿಂದ ದೂರು ಸ್ವೀಕರಿಸಲಾಗಿದೆ. ಇನ್ನೂ ಎಫ್ಐಆರ್ ದಾಖಲಾಗಿಲ್ಲ’ ಎಂದು ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ರೇಣುಕಾ ಯಾದವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಅಸ್ಪೃಶ್ಯತೆ ಶಬ್ದ ಬಳಕೆಯೇ ಅಸ್ಪೃಶ್ಯತೆ ಆಚರಣೆಯ ಮೊದಲ ಹೆಜ್ಜೆ.ಆ ಶಬ್ದ ಬಳಸುವುದು ಕೂಡ ಎಸ್.ಸಿ./ಎಸ್.ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿ ಅಪರಾಧವಾಗುತ್ತದೆ. ಕುಮಾರಸ್ವಾಮಿ ಅವರ ಈ ಹೇಳಿಕೆ ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರವಾಗಿದ್ದು, ಕೂಡಲೇ ಅವರು ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಛಲವಾದಿ ಮಹಾಸಭಾದ ಮುಖಂಡ ಜಿ. ಲಕ್ಷ್ಮೀಪತಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಜೆಡಿಎಸ್ ತನ್ನ ಹೆಸರಿನಲ್ಲಿರುವ ಜಾತ್ಯತೀತ ಪದ ತೆಗೆದು ಹಾಕಿ ‘ಜಾತಿವಾದಿ ಜನತಾದಳ’ ಎಂದು ಬದಲಾಯಿಸಿಕೊಳ್ಳುವುದು ಒಳಿತು’ ಎಂದು ಅವರು ಸಲಹೆ ಮಾಡಿದರು.