ದೊಡ್ಡಬಳ್ಳಾಪುರ: ಯಾವುದೇ ಪರೀಕ್ಷೆಗಳನ್ನು ಅಳಕು, ಆತಂಕದಿಂದ ಎದುರಿಸುವುದನ್ನು ಬಿಟ್ಟು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಎದುರಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಹೇಳಿದರು.
ನಗರದ ಹೊರವಲಯದ ನವೋದಯ ಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ರಾಜಘಟ್ಟದ ಮಾರುತಿ ಪ್ರೌಢ ಶಾಲೆ ಸಹಯೋಗದೊಂದಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗುಣಾತ್ಮಕ ಫಲಿತಾಂಶಕ್ಕಾಗಿ ಆಯೋಜಿಸಿದ್ದ ಎರಡು ದಿನಗಳ ಪ್ರಜ್ವಲ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ವ್ಯವಸ್ಥಿತ ತಯಾರಿ, ಅಳುಕಿಲ್ಲದ ಮನಸ್ಥಿಯನ್ನು ಹೊಂದುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದಾಗಿದೆ. ಪ್ರಶ್ನೆ ಪತ್ರಿಯನ್ನು ಓದಿ ಅರ್ಥೈಸಿಕೊಳ್ಳುವುದು ಪರೀಕ್ಷೆಯ ಮೊದಲ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಪ್ರೌಢ ಶಾಲೆಗಳ 120 ವಿದ್ಯಾರ್ಥಿಗಳಿಗೆ ಗುಣಾತ್ಮಕ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಜ್ಞ ಶಿಕ್ಷಕರಿಂದ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಸಮನ್ವಯ ಅಧಿಕಾರಿ ಬಿ.ಎಚ್.ಮೂರ್ತಿ, ಶಿಕ್ಷಣ ತಜ್ಞ ಮುರುಳಿ,ಸಂಪನ್ಮೂಲ ವ್ಯಕ್ತಿ ಶ್ರೀಲತಾ, ಸುರೇಶ್, ಚಿಕ್ಕೆಗೌಡ, ಅರುಣಾ ಇದ್ದರು.