ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಸರ್ಕಾರದಿಂದ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಯ್ಯನ ಅಗ್ರಹಾರ, ಪುರುಷನಹಳ್ಳಿ ಗ್ರಾಮಗಳಿಗೆ 2016ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ಸ್ಥಳ ಇಲ್ಲದ ಕಾರಣ 20 ವರ್ಷಗಳಿಂದ ಬಳಸದೆ ಅನುಪಯುಕ್ತವಾಗಿದ್ದ ಹಾಗೂ ಶಿಥಿಲವಾಗಿದ್ದ ಶಾಲಾ ಕಟ್ಟಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ನೆಲಸಮಗೊಳಿಸಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಇದರಲ್ಲಿ ಯಾವುದೇ ವೈಯಕ್ತಿಕ ಲಾಭದ ಉದ್ದೇಶ ಇರಲಿಲ್ಲ. ಆದರೆ ರಾಜಕೀಯ ವೈಷಮ್ಯದಿಂದ ನೀಡಲಾದ ದೂರನ್ನು ಪರಿಶೀಲಿಸದೆ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ಅಧಿಕಾರಿಗಳು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದರು. ಕೆಳಹಂತದ ಅಧಿಕಾರಿಗಳು ನೀಡಿದ ವರದಿಯನ್ನು ಕೂಲಂಕಶವಾಗಿ ಪರಿಗಣಿಸದೆ, ಸ್ಥಳ ಪರಿಶೀಲಿಸದೆ ವರದಿ ನೀಡಿದ್ದರು. ಈ ಕುರಿತು ನ್ಯಾಯಾಲಯದ ಮೊರೆಹೊಗಿದ್ದು ಅಧಿಕಾರಿಗಳ ಬೇಜವಾಬ್ದಾರಿ ಕಂಡುಬಂದ ಕಾರಣ ನ್ಯಾಯಾಲಯ ವಜಾ ಆದೇಶವನ್ನು 8 ವಾರಗಳ ಕಾಲ ತಡೆನೀಡಿದೆ ಎಂದರು.