ದೇವನಹಳ್ಳಿ: ಕ್ರೀಡಾಸಕ್ತಿ ಇರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಶ್ರೀ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಆಡಳಿತ ಮಂಡಳಿ ಅಧ್ಯಕ್ಷ ಎನ್. ರಘು ಹೇಳಿದರು.
ಇಲ್ಲಿನ ವೇಣುಗೋಪಾಲಸ್ವಾಮಿ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದರು.
ಐದು ನೂರಕ್ಕೂ ಹೆಚ್ಚು ಸದಸ್ಯತ್ವ ಹೊಂದಿರುವ ಆಡಳಿತ ಮಂಡಳಿಯಲ್ಲಿ ಸದಸ್ಯರ ಗೈರು ಹೆಚ್ಚುತ್ತಿದೆ. ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಪ್ರತಿಯೊಬ್ಬ ಸದಸ್ಯರ ಸಲಹೆಗಳು ಬೇಕು, ಒಬ್ಬೊಬ್ಬ ಸದಸ್ಯರ ಚಿಂತನೆಗಳು, ದೂರದೃಷ್ಟಿ ಯೋಜನೆ ವಿಭಿನ್ನವಾಗಿ ಇರುತ್ತವೆ ಎಂದರು.
ಈಗಾಗಲೇ ಮನರಂಜನೆಗೆ ಅವಶ್ಯಕವಾಗಿರುವ ಪರಿಕರಗಳಿವೆ. ಯುವ ಸಮುದಾಯಕ್ಕೆ ದೈಹಿಕ ಕಸರತ್ತು ನಡೆಸಲು ಮಲ್ಟಿಜಿಮ್ ಇದೆ. ಕ್ರೀಡಾಂಗಣದ ಪಕ್ಕದಲ್ಲಿ ಶಾಶ್ವತ ಈಜುಕೊಳ ನಿರ್ಮಾಣ ಮಾಡಲು ಪುರಸಭೆಗೆ ಮನವಿ ಸಲ್ಲಿಸಲಾಗಿದ್ದು ಕೆಲವೊಂದು ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಿದರು.
ಬೇಸಿಗೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರತಿಭಾನ್ವಿತ ಷಟಲ್ ಪಟುಗಳು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು, ಉಚಿತವಾಗಿ ಅವಕಾಶ ನೀಡಲಾಗುತ್ತದೆ ಎಂದರು.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ವರ್ಧೆ ನಡೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ, ಅಭ್ಯಾಸ ಸಂದರ್ಭದಲ್ಲಿ ಹಿರಿಯ ಷಟಲ್ ಪಟುಗಳು ಸಲಹೆ ಸೂಚನೆ ನೀಡಲಿದ್ದಾರೆ. ಅಗತ್ಯ ಅನಿಸಿದರೆ ಸೂಕ್ತ ತರಬೇತಿದಾರರನ್ನು ನಿಯೋಜನೆ ಮಾಡಲಾಗುವುದು ಎಂದರು.