ಹೊಸಕೋಟೆ: ‘21ನೇ ಶತಮಾನದಲ್ಲೂ ಮುಗ್ಧ ಮಕ್ಕಳ ರಕ್ಷಣೆಗೆ ಕಾನೂನು ಹೋರಾಟ ನಡೆಸಬೇಕಾಗಿರುವುದು ವಿಷಾದನೀಯ’ ಎಂದು ಬೆಂಗಳೂರು ಗ್ರಾಮಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೇಮಾವತಿ ಹೇಳಿದರು.
ಅವರು ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಫಸ್ಟ್ ಅಮೇರಿಕನ್ ಕಂಪನಿ ಜಂಟಿಯಾಗಿ ಏರ್ಪಡಿಸಿದ್ದ ಮಕ್ಕಳ ರಕ್ಷಣಾ ಅಭಿಯಾನದ ಜನಜಾಗೃತಿಗಾಗಿ ಏರ್ಪಡಿಸಿದ್ದ ಸೈಕಲ್ ಜಾಥಾವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಮಕ್ಕಳ ಹಕ್ಕುಗಳ ರಕ್ಷಣೆ ಸಾಮಾಜಿಕ ಕರ್ತವ್ಯ. 1992ರಲ್ಲಿ ಭಾರತವು ವಿಶ್ವಸಂಸ್ಥೆಯೊಂದಿಗೆ ಮಕ್ಕಳ ರಕ್ಷಣೆಯ ಬಗ್ಗೆ ಒಡಂಬಡಿಕೆ ಮಾಡಿಕೊಂಡಿದೆ. ಈವರೆಗೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾದ್ಯವಾಗಲಿಲ್ಲ. ಇದನ್ನು ಸಂಪೂರ್ಣವಾಗಿ ಜಾರಿ ಮಾಡಲು ಕೇವಲ ಸರ್ಕಾರಗಳಿಂದ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯ’ ಎಂದು ತಿಳಿಸಿದರು.
ಸಮಾಜದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಶೋಷಣೆ ಮತ್ತು ಲೈಂಗಿಕ ಶೋಷಣೆ ಬಗ್ಗೆ ಯಾರಿಗಾದರೂ ಗಮನಕ್ಕೆ ಬಂದರೆ ಅಂತವರು ಕೂಡಲೇ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಿ ಮಾಹಿತಿ ಕೊಡಬಹುದು. ದೂರು ಕೊಟ್ಟವರ ಹೆಸರನ್ನು ಯಾವುದೇ ಸಂದರ್ಭದಲ್ಲೂ ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಮಕ್ಕಳು ದೇಶದ ಸಂಪತ್ತು, ಆಸ್ತಿ ಅವರನ್ನು ರಕ್ಷಣೆ ಮಾಡಬೇಕಾಗಿರುವುದು. ಪ್ರತಿಯೊಬ್ಬರ ಕರ್ತವ್ಯ ಎಂದರು.
ಮಕ್ಕಳನ್ನು ದೈಹಿಕವಾಗಿ ಹಿಂಸೆ ಮಾಡುವವರು ಮನುಷ್ಯರಲ್ಲ ಅವರು ರಾಕ್ಷಸರು ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಮಾನವತ್ವವನ್ನು ಹೊಂದಿರುವ ಮನುಷ್ಯರು ಬೇಕೇ ಹೊರತು ರಾಕ್ಷಸರಲ್ಲ ಎಂದರು.
ತಾಲ್ಲೂಕಿನ 293 ಶಾಲೆಗಳಲ್ಲಿ ಓದುತ್ತಿರುವ 41 ಸಾವಿರ ಮಕ್ಕಳಿಗೆ ಈ ರೀತಿಯ ಜಾಗೃತಿ ಮಾಡಬೇಕಾಗಿದೆ. ಸಂಸ್ಥೆಯು ಯೋಜನೆ ರೂಪಿಸಿದರೆ ಎಲ್ಲ ಶಾಲೆಗಳಲ್ಲಿಯೂ ಮಕ್ಕಳ ರಕ್ಷಣೆಯ ಜಾಗೃತಿ ಕಾರ್ಯಕ್ರಮ ಮಾಡಲು ಸಹಕಾರ ನೀಡುವುದಾಗಿ ತಿಳಿಸಿದರು.
ನಗರದಲ್ಲಿ 250 ಸೈಕಲ್ ಗಳಲ್ಲಿ ಕಾರ್ಯಕರ್ತರು ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಬಾಲಕಾರ್ಮಿಕ ಇಲಾಖೆಯ ಯೋಜನಾಧಿಕಾರಿ ಸುಬ್ಬುರಾವ್, ಸಂದೀಪ್ ನಾರಾಯಣ್, ಪ್ರವೀಣ್ ಭಾಗವಹಿಸಿದ್ದರು.