ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದ ಪ್ರಚಾರಕ್ಕಾಗಿ ತಾಲ್ಲೂಕು ಕಚೇರಿ ವೃತ್ತದಿಂದ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯ ಜಿ. ರಾಮೇಗೌಡ ವೃತ್ತದ ವರೆಗಿನ ಪಾದಚಾರಿ ಮಾರ್ಗದಲ್ಲಿ ಪಕ್ಷದ ಧ್ವಜ ನೆಡಲು ಸಿಮೆಂಟ್ ಟೈಲ್ಸ್ ಕಿತ್ತು ಹಾಕಿ ಕಬ್ಬಿಣದ ಸಲಾಕೆಗಳನ್ನು ನೆಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯು ದಶಕದ ನಂತರ ಇಡೀ ನಗರದಲ್ಲಿಯೇ ಅತ್ಯಂತ ಸುಸಜ್ಜಿತವಾಗಿ ಅಭಿವೃದ್ಧಿಯಾಗಿತ್ತು. ಸುಮಾರು ಅರ್ಧ ಕಿ.ಮೀ ಉದ್ದದ ರಸ್ತೆಯ ಎರಡಯ ಬದಿಯಲ್ಲೂ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಸಿಮೆಂಟ್ ಟೈಲ್ಸ್ ಅಳವಡಿಸಲಾಗಿತ್ತು.
ಈ ರಸ್ತೆ ಅಭಿವೃದ್ಧಿಗೂ ಮುನ್ನ ಎರಡೂ ಬದಿಯಲ್ಲೂ ನೂರಾರು ವರ್ಷಗಳಷ್ಟು ಹಳೆಯದಾದ ಬೃಹತ್ ಮರಗಳನ್ನು ಕತ್ತರಿಸಲಾಗಿತ್ತು. ಇದನ್ನು ವಿರೋಧಿಸಿ ಪರಿಸರವಾದಿಗಳು ಪ್ರತಿಭಟನೆ ಕೂಡ ನಡೆಸಿದ್ದರು.
ಲೋಕೋಪಯೋಗಿ ಇಲಾಖೆಯ ತಾಲ್ಲೂಕು ಕಾರ್ಯಪಾಲಕ ಎಂಜಿನಿಯರ್ ಜಯಪ್ರಕಾಶ್, ‘ಪಾದಚಾರಿ ರಸ್ತೆಯಲ್ಲಿ ಧ್ವಜ ನೆಡಲು ನಮ್ಮಿಂದ ಯಾವುದೇ ಅನುಮತಿ ನೀಡಿಲ್ಲ. ಟೈಲ್ಸ್ ಹಾಳಾಗಿರುವ ಬಗ್ಗೆ ಕಾರ್ಯಕ್ರಮ ಆಯೋಜಕರ ಗಮನಕ್ಕೆ ತರಲಾಗಿದೆ. ಹಾಳಾಗಿರುವ ಟೈಲ್ಸ್ ಸರಿಪಡಿಸಿಕೊಡುವುದಾಗಿ ತಿಳಿಸಿದ್ದಾರೆ’ ಎಂದರು.