ದೇವನಹಳ್ಳಿ: ತಾಲ್ಲೂಕಿನ ವಿಶ್ವನಾಥಪುರದ ಖಾಸಗಿ ಜಮೀನೊಂದರಲ್ಲಿ 8–9ನೇ ಶತಮಾನದ ವೀರಗಲ್ಲು ಪತ್ತೆಯಾಗಿದ್ದು, ವೀರ ಮಹಿಳೆಯನ್ನು ಹೊಂದಿರುವ ವೀರಗಲ್ಲು ದೊರೆತಿರುವುದು ಅಪರೂಪವಾಗಿದೆ ಎಂದು ಇತಿಹಾಸ ಸಂಶೋದಕ ಬಿಟ್ಟಸಂದ್ರ ಗರುಸಿದ್ಧಯ್ಯ.ಬಿ.ಜಿ ತಿಳಿಸಿದರು.
ವಿಶ್ವನಾಥಪುರದಲ್ಲ ಎರಡು ವರ್ಷಗಳಿಂದ ಶಾಸನ ಮತ್ತು ವೀರಗಲ್ಲು ಇದೆ ಎಂದು ಹುಡುಕಾಟ ಮಾಡಲಾಗುತ್ತಿತ್ತು. ಇಲ್ಲಿನ ಖಾಸಗಿ ಜಮೀನಿನ ನೀಲಗಿರಿ ತೋಪಿನಲ್ಲಿ ಒಂದೆರಡು ವೀರಗಲ್ಲುಗಳಿವೆ ಎಂದು ಮಾಹಿತಿ ತಿಳಿದು ಪತ್ತೆಗಾಗಿ ಹುಡಕಾಟ ನಡೆಸಲಾಗಿತ್ತು.
ವೀರಗಲ್ಲು ಇದ್ದ ಪ್ರದೇಶವನ್ನು ಕೆಲವರು ನಿಧಿಗಾಗಿ ಅಗೆಯಲು ಯತ್ನಿಸಿರುವುದು ತಿಳಿದು ಬಂದಿತ್ತು. ಕೂಡಲೇ ಎರಡೂ ವೀರಗಲ್ಲು ಕಲ್ಲು ಇದ್ದ ಜಾಗ ಸಂರಕ್ಷಿಸಲಾಯಿತು. ಈ ವೇಳೆ ಮತ್ತೆರಡು ವೀರಗಲ್ಲುಗಳು ಮತ್ತು ಒಂದು ಶಾಸನ ಕಲ್ಲು ದೊರೆತಿದೆ. ಇದೊಂದು ಐತಿಹಾಸಿಕ ವೀರಗಲ್ಲು ಆಗಿರುವುದರಿಂದ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಯಿತು. ಪಂಚಾಯಿತಿ ಸಹಕಾರ ಪಡೆದು ಭೂಮಿಯಲ್ಲಿ ಹುದಗಿದ್ದ ವೀರಗಲ್ಲುಗಳನ್ನು ಜೆಸಿಬಿ ಮೂಲಕ ಹೊರತೆಗೆದು ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.
ಇವು ಸುಮಾರು 8-9ನೇ ಶತಮಾನಕ್ಕೆ ಸೇರಿವೆ. ಈ ವೀರಗಲ್ಲುಗಳು ಅಪರೂಪದ ತುರುಗೋಳ್ ವೀರಗಲ್ಲಾಗಿದ್ದು, ನಾಲ್ಕು ವೀರಗಲ್ಲುಗಳ ಪೈಕಿ ಒಂದು ವಿಶೇಷವಾಗಿದೆ. ದೊರೆತಿರುವ ಒಂದು ತೃಟಿತ ಶಾಸನವನ್ನು ಮೈಸೂರಿನಲ್ಲಿನ ಶಾಸನ ತಜ್ಞರಿಗೆ ಕಳುಹಿಸಿಕೊಡಲಾಯಿತು. ಅಲ್ಲಿನ ಶಾಸನ ತಜ್ಞರ ಪ್ರಕಾರ ಈ ಹಿಂದೆ ಇಲ್ಲಿ ಪ್ರದೇಶದಲ್ಲಿ ಘೋರ ಯುದ್ಧವಾಗಿದೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.
ಕೆತ್ತಲ್ಪಟ್ಟವಲ್ಲಿ ಅಶ್ವ, ಅಶ್ವದ ಮೇಲೆ ಛತ್ರಿ, ಸ್ವರ್ಗ ಅರೋಹಣ, ಮಹಿಳೆ ಮತ್ತು ಸರದಾರನ ಅದ್ಭುತ ಚಿತ್ರ ವೀರಗಲ್ಲಿನಲ್ಲಿ ಕಾಣಬಹುದು ಎಂದರು.
ವಿಶ್ವನಾಥಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪದ್ಮಮ್ಮ ಕೆ.ವಿ.ಸ್ವಾಮಿ, ವೀರಗಲ್ಲುಗಳು ವಿಶ್ವನಾಥಪುರದ ಇತಿಹಾಸ ತಿಳಿಸುತ್ತದೆ ಎಂದು ಹೇಳಿದರು.
ವಿಶ್ವನಾಥಪುರ ಗ್ರಾಮದ ಮುಖಂಡ ನಾರಾಯಣಸ್ವಾಮಿ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.