ಆನೇಕಲ್:ಪಟ್ಟಣ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಏಷ್ಯಾ ಫೆಸಿಫಿಕ್ ಸಾಹಿತ್ಯೋತ್ಸವನ್ನು ಸೋಮವಾರ ಲೇಖಕ ಮತ್ತು ಪುರಾಣ ಶಾಸ್ತ್ರಜ್ಞ ದೇವದತ್ತ ಪಟ್ನಾಯಕ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಾಹಿತ್ಯ, ಸಂಸ್ಕೃತಿ ಈ ದೇಶದ ಆಸ್ತಿಯಾಗಿದೆ. ಹಲವು ದಶಕಗಳು ಕಳೆದರೂ ಪರಂಪರೆ, ಸಾಂಸ್ಕೃತಿಕ ವಾತಾವರಣ ಪ್ರಚಲಿತದಲ್ಲಿದೆ. ಯುವ ಸಮುದಾಯ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಪುರಾಣಗಳ ಮಹತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಲಯನ್ಸ್ ಕಾಲೇಜಿನ ಸಹ ಕುಲಪತಿ ಅಭಯ್ ಜಿ. ಚೆಬ್ಬಿ ಮಾತನಾಡಿ, ಸಾಹಿತ್ಯವನ್ನು ಸಮುದಾಯಕ್ಕೆ ಪಸರಿಸುವ ನಿಟ್ಟಿನಲ್ಲಿ ಏಷ್ಯಾ ಫೆಸಿಫಿಕ್ ಸಾಹಿತ್ಯೋತ್ಸವ ಆಯೋಜಿಸಲಾಗಿದೆ. ವಿವಿಧ ದೇಶದ ವಿಷಯ ತಜ್ಞರು ಈ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಅವರ ಅನುಭವಗಳು ಇಂದಿನ ಯುವಪೀಳಿಗೆಗೆ ಆದರ್ಶವಾಗಲಿದೆ. ಸಾಹಿತ್ಯ ಹಬ್ಬದ ಪ್ರಯುಕ್ತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಸಾಹಿತ್ಯೋತ್ಸವ ಅಂಗವಾಗಿ ಸೋಮವಾರ ಪತ್ರಕರ್ತ ವಿಕ್ಟರ್ ಮಲೆಟ್ ಅವರು ಜೀವ ನದಿಗಳ ಕುರಿತು ಮಾತನಾಡಿದರು. ‘ಕವಿತೆ ಮತ್ತು ಕಾವ್ಯ’ ವಿಚಾರ ಸಂಕಿರಣದಲ್ಲಿ ಶಿನಿ ಅಂಥೋಣಿ, ಜೋಸ್ ವರ್ಗೀಸ್, ಜೆನ್ನಿಫರ್, ಮಾರ್ಷಲ್ ಗಾಸ್, ರೆಬಾಕಾ ಪಾಲ್ಗೊಂಡಿದ್ದರು.
‘ಭಾರತದಲ್ಲಿ ಕಾದಂಬರಿಗಳ ಪ್ರಕಟಣೆ’ ವಿಚಾರ ಸಂಕಿರಣದಲ್ಲಿ ಲೇಖಕ ಅಶ್ವನಿ ಕುಮಾರ್, ಅರಿಂದಮ್ ರಾಯ್, ಬಿಟನ್ ಚಕ್ರಬರ್ತಿ, ನೀತಾ ಗುಪ್ತಾ ಪಾಲ್ಗೊಂಡಿದ್ದರು. ‘ದಿ ಆರ್ಟ್ ಆಫ್ ಕ್ಯಾಲಿಗ್ರಫಿ’ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು.