ತುಮಕೂರು: ಪ್ರಪಂಚದಲ್ಲಿ ಅತ್ಯಂತ ರುಚಿಕರವೆಂದೆ ಹೆಸರಾದ ಜಿಲ್ಲೆಯ ಕೊಬ್ಬರಿಗೆ ಪ್ರತ್ಯೇಕ ಕನಿಷ್ಠ ಬೆಂಬಲ ಬೆಲೆ ಬೇಕು ಎಂಬ ಬೇಡಿಕೆ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ವಿಷಯವಾಗಿ ಚರ್ಚಿತವಾಗತೊಡಗಿದೆ.
’ಅಡಿಕೆ ಬೆಳೆಗಾರರು ರಾಜಕೀಯವಾಗಿ ಪ್ರಭಾವ ಬೀರುತ್ತಿರುವಷ್ಟು ತೆಂಗು ಬೆಳೆಗಾರರು ಬೀರುತ್ತಿರಲಿಲ್ಲ. ಇದರಿಂದಾಗಿಯೇ ಇಷ್ಟು ದಿನ ತೆಂಗು ಬೆಳೆಗಾರರ ಸಂಕಷ್ಟಗಳಿಗೆ ಯಾವ ರಾಜಕೀಯ ಪಕ್ಷಗಳು ಧ್ವನಿಯಾಗುತ್ತಿರಲಿಲ್ಲ’ ಎನ್ನುತ್ತಾರೆ ಬೆಲೆ ಕಾವಲು ಸಮಿತಿ ಕಾರ್ಯದರ್ಶಿ ಶ್ರೀಕಾಂತ ಕೆಳಹಟ್ಟಿ.
’ನಾಲ್ಕೈದು ವರ್ಷಗಳಿಂದ ಬೆಳೆಗಾರರಲ್ಲಿ ಹೆಚ್ಚಿದ ರಾಜಕೀಯ ಪ್ರಜ್ಞೆ, ಸಂಘಟನಾತ್ಮಕ ಹೋರಾಟ, ತೆಂಗು ನೀತಿಗಳ ಚರ್ಚೆಯಿಂದಾಗಿ ರಾಜಕೀಯ ಪಕ್ಷಗಳು ಎಚ್ಚರಗೊಂಡಿವೆ. ಹೀಗಾಗಿಯೇ ಈ ಸಲ ಚುನಾವಣೆಯ ಪ್ರಮುಖ ವಿಷಯವಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
’ಕೊಬ್ಬರಿಗೆ ಬೆಂಬಲ ಬೆಲೆ ವಿಷಯ ತಿಪಟೂರು ಕ್ಷೇತ್ರ ಮಾತ್ರವಲ್ಲ, ಜಿಲ್ಲೆಯ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದನ್ನು ಬಿಜೆಪಿ ಬಳಸಿಕೊಂಡು ಬೆಳಗಾರರನ್ನು ದಿಕ್ಕುತಪ್ಪಿಸುತ್ತಿದೆ. ರೈತರ ಮೇಲೆ ಪ್ರೀತಿ ಇದ್ದರೆ ಮಲೇಷ್ಯಾದಿಂದ ಏಕೆ ಕೊಬ್ಬರಿ ರಫ್ತು ಮಾಡಿಕೊಳ್ಳುತ್ತಿದೆ’ ಎಂದು ಪ್ರಶ್ನಿಸುತ್ತಾರೆ ತಿಪಟೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಶಶಿಧರ್.
ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆಯ ಹೆಗ್ಗಳಿಕೆಯ ತಿಪಟೂರು ಎಪಿಎಂಸಿಯ ವಹಿವಾಟು ವಾರ್ಷಿಕ ₹ 800 ಕೋಟಿ. ತಿಪಟೂರು ಮಾರುಕಟ್ಟೆಯಲ್ಲಾಗುವ ಬೆಲೆ ನಿರ್ಧಾರ ಇಡೀ ಜಿಲ್ಲೆಯ ಕೊಬ್ಬರಿ ಬೆಲೆಯನ್ನು ನಿರ್ಧರಿಸುತ್ತದೆ.
ಎಪಿಎಂಸಿ ಕಾಯ್ದೆಯನ್ನು ಉಲ್ಲಂಘಿಸಿ, ಎಪಿಎಂಸಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಎಪಿಎಂಸಿಯಿಂದ ಹೊರಗೆ ಹಳ್ಳಿ– ಹಳ್ಳಿಗಳಲ್ಲಿ ತೆರೆದಿ
ರುವ ಮಂಡಿಗಳ ವರ್ತಕರ ಅಕ್ರಮ ವ್ಯಾಪಾರ ಸೇರಿದರೆ ವಾರ್ಷಿಕ ₹ 1200 ಕೋಟಿಗೂ ಅಧಿಕ ಕೊಬ್ಬರಿ ವಹಿವಾಟು ಜಿಲ್ಲೆಯಲ್ಲಿ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ 1.74 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ದೇಶದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಎರಡನೇ ಜಿಲ್ಲೆ ಎಂಬ ಖ್ಯಾತಿಯೂ ಸಿಕ್ಕಿದೆ. ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಆಯ್ಕೆಯಾಗಿರುವ ಎಲ್ಲ ಶಾಸಕರು ಕೊಬ್ಬರಿ ವರ್ತಕರೇ ಆಗಿದ್ದರು ಎಂಬುದು ಇಲ್ಲಿನ ಕೊಬ್ಬರಿ ರಾಜಕಾರಣಕ್ಕೆ ಉದಾಹರಣೆಯಾಗಿದೆ.
ಈ ಸಲವೂ ಪ್ರಮುಖ ಮೂರು ಪಕ್ಷಗಳು ಕೊಬ್ಬರಿ ವರ್ತಕ ಹಿನ್ನೆಲೆಯವರಿಗೆ ಟಿಕೆಟ್ ನೀಡಿವೆ. ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಬಿ.ನಂಜಾಮರಿ ಅವರು ಇಡೀ ವಹಿವಾಟಿನ ಮೇಲೆ ಬಿಗಿ ಹಿಡಿತ ಹೊಂದಿದ್ದಾರೆ. ಅವರು ಹೇಳಿಂದಂತೆ ಬೆಲೆ ಏರಿಳಿತ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಉತ್ತರ ಭಾರತ ರಾಜ್ಯಗಳ ಮಾರುಕಟ್ಟೆಯಲ್ಲಿ ಅವರದೇ ಪಾರಮ್ಯ. ಬಿಜೆಪಿ ಅಭ್ಯರ್ಥಿ ಬಿ.ಸಿ.ನಾಗೇಶ್, ಜೆಡಿಎಸ್ ಅಭ್ಯರ್ಥಿ ಲೋಕೇಶ್ವರ್ ನೇರವಾಗಿ ವ್ಯಾಪಾರಿಗಳಲ್ಲದಿದ್ದರೂ ಅವರ ಕುಟುಂಬಸ್ಥರು ಇದ್ದಾರೆ.
ಕಾಂಗ್ರೆಸ್ ಸರ್ಕಾರ 2014ರಲ್ಲಿ ಆನ್ಲೈನ್ ಟ್ರೇಡಿಂಗ್ ಪದ್ಧತಿಯನ್ನು ತಿಪಟೂರು ಮಾರುಕಟ್ಟೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿತು. ಆದರೆ ಆನ್ಲೈನ್ ಟ್ರೇಡಿಂಗ್ ಪದ್ಧತಿ ವಿರೋಧಿಸಿ ವರ್ತಕರು ವ್ಯಾಪಾರ ನಿಲ್ಲಿಸಿ ಪ್ರತಿಭಟನೆಗೆ ನಿಂತರು. ಆಗ ಎಪಿಎಂಸಿ ಕಾರ್ಯದರ್ಶಿಯಾಗಿದ್ದ ಎಸ್.ನ್ಯಾಮಗೌಡ ಅವರು ಇದಕ್ಕೆ ಸೊಪ್ಪು ಹಾಕಲಿಲ್ಲ. ಕೊನೆಗೂ ಆನ್ಲೈನ್ ಟ್ರೇಡಿಂಗ್ ಆರಂಭವಾಯಿತು.
ತಿಪಟೂರು ಎಪಿಎಂಸಿಗಳಿಂದ ಹೊರಗಿದ್ದ ಅಕ್ರಮ ಮಂಡಿಗಳನ್ನು ಮುಚ್ಚಿಸುವಲ್ಲಿ ನ್ಯಾಮಗೌಡ ಶ್ರಮಿಸಿದ್ದರು. ಎಪಿಎಂಸಿಯಿಂದ ಹೊರಗೆ ಅಕ್ರಮವಾಗಿ ರವಾನೆಯಾಗುತ್ತಿದ್ದ ವಹಿವಾಟಿಗೂ ತಡೆ ಹಾಕಿದ್ದರು. ಸುಧಾರಣೆಯ ಪರಿಣಾಮವಾಗಿ ಕೊಬ್ಬರಿ ಬೆಲೆ ಕ್ವಿಂಟಲ್ಗೆ ಒಮ್ಮೆ ₹ 18 ಸಾವಿರದವರೆಗೂ ಏರಿಕೆಯಾಗಿತ್ತು.
ಇದಕ್ಕಿದ್ದಂತೆ ರಾಜ್ಯ ಸರ್ಕಾರ ಎಸ್.ನ್ಯಾಮಗೌಡ ಅವರನ್ನು ವರ್ಗಾವಣೆ ಮಾಡಿತ್ತು. ಇವರ ವರ್ಗಾವಣೆ ಬೆನ್ನಲ್ಲೆ ಆನ್ಲೈನ್ ಟ್ರೇಡಿಂಗ್ ಪದ್ಧತಿಯನ್ನು ಹಳ್ಳ ಹಿಡಿಸಲಾಯಿತು. ಅಲ್ಲದೇ ಬೆಲೆ ಮತ್ತೇ ಕೆಳಗಿಳಿಯ ತೊಡಗಿತು. ನ್ಯಾಮಗೌಡ ಅವರನ್ನು ಮತ್ತೇ ತಿಪಟೂರಿಗೆ ವರ್ಗಾವಣೆ ಮಾಡಬೇಕು. ಕನಿಷ್ಠ ಬೆಂಬಲ ಬೆಲೆಗೆ ಪೂರಕವಾಗಿ ರಾಜ್ಯ ಸರ್ಕಾರ ಕನಿಷ್ಠ ₹ 5000 ಪ್ರೋತ್ಸಾಹ ಧನ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೆಳೆಗಾರರು ಬೃಹತ್ ಜಾಥಾ ನಡೆಸಿದ್ದರು.
ಬೆಂಗಳೂರಿಗೆ ತೆರಳುತ್ತಿದ್ದ ಜಾಥಾವನ್ನು ತಡೆಯುವಲ್ಲಿ ಯಶಸ್ವಿಯಾದ ರಾಜ್ಯ ಸರ್ಕಾರ ಬೆಳೆಗಾರರ ಬೇಡಿಕೆಗಳನ್ನು ಮಾತ್ರ ಈಡೇರಿಸಲಿಲ್ಲ. ಇದು ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಾಗಿದೆ. ಸ್ಥಳೀಯ ಶಾಸಕ ಷಡಕ್ಷರಿ, ಜಿಲ್ಲಾ ಉಸ್ತುವಾರಿ ಸಚಿವರೂ, ಪ್ರೋತ್ಸಾಹ ಧನ ನೀಡುವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆಗಿದ್ದ ಟಿ.ಬಿ.ಜಯಚಂದ್ರ ಬೆಳೆಗಾರರ ಪರ ನಿಲ್ಲಲಿಲ್ಲ ಎಂಬ ಆಕ್ರೋಶ ಆಗ ಬೆಳೆಗಾರರಲ್ಲಿತ್ತು.
ಕೊಬ್ಬರಿ ಬೆಲೆ ಕುಸಿತದ ಬಗ್ಗೆ, ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಮೂರು ಸಲ ಸಂಸತ್ನಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಅವರೊಂದಿಗೆ ರಾಜ್ಯದ ತೆಂಗು ಬೆಳೆಯುವ ಬೇರೆ ಬೇರೆ ಜಿಲ್ಲೆಗಳ ಸಂಸದರು ಧ್ವನಿಗೂಡಿಸಲಿಲ್ಲ. ಬಿಜೆಪಿ ಸಂಸದರು ಜಾಣ ಮೌನಕ್ಕೆ ಜಾರಿದ್ದರು. ಆದರೆ ಈಗ ಬಿಜೆಪಿ ಬೆಂಬಲ ಬೆಲೆಯನ್ನೇ ಜಿಲ್ಲೆಯಲ್ಲಿ ಪ್ರಮುಖ ಚುನಾವಣಾ ವಿಷಯವಾಗಿಸಲು ಪ್ರಯತ್ನಿಸಿದೆ.
ತಿಪಟೂರಿನಲ್ಲಿ ಈಚೆಗೆ ಬಿಜೆಪಿ ಆಯೋಜಿಸಿದ್ದ ತೆಂಗು ಬೆಳೆಗಾರರ ಸಮಾವೇಶದಲ್ಲಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ‘ರಾಜ್ಯದಲ್ಲಿ ಸರ್ಕಾರ ಬಂದರೆ ತಿಪಟೂರಿನ ಕೊಬ್ಬರಿ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ಕರ್ನಾಟಕಕ್ಕೆ ಪ್ರತ್ಯೇಕ ಬೆಂಬಲ ಬೆಲೆ ನೀಡುತ್ತೇವೆ’ ಎಂಬ ಭರವಸೆಯ ದಾಳ ಉರುಳಿಸಿ ಹೋಗಿದ್ದಾರೆ.
ಈಗ ಕೇರಳ, ತಮಿಳುನಾಡಿನ ಕೊಬ್ಬರಿ ಉತ್ಪಾದನಾ ವೆಚ್ಚ ಪರಿಗಣಿಸಿ ಕರ್ನಾಟಕದ ಕೊಬ್ಬರಿಗೂ ಬೆಂಬಲ ಬೆಲೆ ಘೋಷಣೆ ಮಾಡಲಾಗುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ಉತ್ಪಾದನಾ ವೆಚ್ಚ ನಮಗಿಂತಲೂ ಮೂರು– ನಾಲ್ಕು ಪಟ್ಟು ಕಡಿಮೆ ಇದೆ. ಒಂದು ವೇಳೆ ತಿಪಟೂರು ಕೊಬ್ಬರಿ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ಬೆಂಬಲ ಬೆಲೆ ನೀಡಿದರೆ ಉತ್ತಮ ಬೆಲೆ ಸಿಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಜಿಲ್ಲೆಯ ಬೆಳೆಗಾರರು.
ತೆಂಗು ಬೆಳೆಗಾರರ ಜತೆ ಕೇಂದ್ರ ಇದೆ
ಕನಿಷ್ಠ ಬೆಂಬಲ ಬೆಲೆ ಪ್ರತ್ಯೇಕವಾಗಿ ನೀಡುವುದಷ್ಟೆ ಅಲ್ಲ, ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ತೆಂಗಿನ ತೋಟಗಳಿಗೆ ಹನಿ ನೀರಾವರಿಗೆ ಶೇ 100 ಸಹಾಯಧನ ನೀಡುತ್ತಿದೆ. ಈ ಮೊದಲು ಇದು ಇರಲಿಲ್ಲ ಎಂದು ಬಿಜೆಪಿ ಅಭಿವೃದ್ಧಿ ಪ್ರಕೋಷ್ಠಕದ ಜಿ.ಎಸ್.ಬಸವರಾಜ್ ಹೇಳಿದರು. ರಾಜ್ಯದ ಕೊಬ್ಬರಿಗೆ ಪ್ರತ್ಯೇಕ ಬೆಂಬಲ ಬೆಲೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈ ಹಿಂದಿನ ಕೇಂದ್ರ ಸರ್ಕಾರಗಳಿಂದ ನ್ಯಾಯ ಸಿಕ್ಕಿರಲಿಲ್ಲ. ಈಗ ನ್ಯಾಯ ಸಿಗಲಿದೆ ಎಂದು ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರಕ್ಕೆ ಹಿತಾಸಕ್ತಿ ಇಲ್ಲ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಪ್ರತ್ಯೇಕ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಅಂದರೆ ಅವರಿಗೆ ರೈತರ ಹಿತಾಸಕ್ತಿ ಬೇಕಿಲ್ಲ, ಅವರ ಸರ್ಕಾರ ಅಧಿಕಾರಕ್ಕೆ ಬರುವುದು ಬೇಕಿದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
’ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಲೋಕಸಭೆಯಲ್ಲಿ ಸಾಕಷ್ಟು ಸಲ ಚರ್ಚಿಸಿದ್ದೇನೆ. ಒಮ್ಮೆಯೂ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಲಿಲ್ಲ. ಈಗ ಪ್ರತ್ಯೇಕ ಬೆಂಬಲ ಬೆಲೆಯ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.
’ಒಂದು ಕಡೆ ಪ್ರತ್ಯೇಕ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ವಿದೇಶಗಳಿಂದ ತೆಂಗಿನಕಾಯಿ ಅಮದು ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ. ಇದು ಏನನ್ನು ಸೂಚಿಸುತ್ತದೆ’ ಎಂದು ಪ್ರಶ್ನಿಸಿದರು.
ತೆಂಗು ಬೆಳೆಗಾರರು ವಾಣಿಜ್ಯ ಬ್ಯಾಂಕ್ಗಳಲ್ಲಿ ಮಾಡಿರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಹಾಗಾದರೆ ಮಾತ್ರ ಅವರಿಗೆ ನಿಜವಾದ ಕಾಳಜಿ ಇದೆ ಎಂದು ತಿಳಿಯಬಹುದು ಎಂದು ಹೇಳಿದರು.
ಏನು ವ್ಯತ್ಯಾಸ?
ಪ್ರಧಾನವಾಗಿ ತಮಿಳುನಾಡು, ಕೇರಳ ಹಾಗೂ ಇತರೆ ರಾಜ್ಯಗಳ ಕೊಬ್ಬರಿಗೂ, ರಾಜ್ಯದ ಕೊಬ್ಬರಿಗೂ ವ್ಯತ್ಯಾಸವಿದೆ. ಬೇರೆ ರಾಜ್ಯಗಳ ಕೊಬ್ಬರಿಯನ್ನು ಮಿಲ್ಲಿಂಗ್ (ಎಣ್ಣೆ) ಕೊಬ್ಬರಿ ಎಂದು ಕರೆಯಲಾಗುತ್ತದೆ. ಇಲ್ಲಿ ತೆಂಗಿನಕಾಯಿಯನ್ನು ಕಿತ್ತು ಬೃಹತ್ ಡ್ರೈಯರ್ ಯಂತ್ರಗಳಲ್ಲಿಟ್ಟು ಕೃತಕವಾಗಿ ಕೊಬ್ಬರಿ ಮಾಡಲಾಗುತ್ತಿದೆ. ಇದನ್ನು ಎಣ್ಣೆ ತೆಗೆಯಲು ಮಾತ್ರ ಉಪಯೋಗಿಸಲಾಗುತ್ತದೆ. ಹೀಗಾಗಿ ಇಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಇದೆ.
ರಾಜ್ಯದಲ್ಲಿ ತೆಂಗಿನಕಾಯಿಯನ್ನು ಹನ್ನೊಂದು ತಿಂಗಳು ಕಾಲ ಸಂಗ್ರಹಿಸಿಟ್ಟು ನೈಸರ್ಗಿಕವಾಗಿ ಕೊಬ್ಬರಿ ಮಾಡಲಾಗುತ್ತದೆ. ಇದನ್ನು ಬಾಲ್ ಕೊಬ್ಬರಿ (ತಿನ್ನಲು ಬಳಸುವ ಕೊಬ್ಬರಿ) ಎಂದು ಕರೆಯಲಾಗುತ್ತದೆ. ಉತ್ಪಾದನೆಯ ಶೇ 97ರಷ್ಟು ಕೊಬ್ಬರಿ ತಿನ್ನಲು ಹಾಗೂ ಅಡುಗೆ ಪದಾರ್ಥಗಳನ್ನು ಮಾಡಲು ಬಳಸಲಾಗುತ್ತದೆ. ಹೀಗಾಗಿ ಇದಕ್ಕೆ ಭೌಗೋಳಿಕ ಸೂಚಕ (ಜಿಐ) ನೀಡಬೇಕು. ಪ್ರತ್ಯೇಕ ಬೆಂಬಲ ಬೆಲೆ ನೀಡಬೇಕೆಂಬುದು ರೈತರ ಬೇಡಿಕೆಯಾಗಿತ್ತು.
’ಕೇರಳ, ತಮಿಳುನಾಡಿನಲ್ಲಿ ತೆಂಗಿನ ಮರಗಳ ಇಳುವರಿ ನಮ್ಮ ರಾಜ್ಯದ ಇಳುವರಿಗಿಂತ ದುಪ್ಪಟ್ಟು ಇದೆ. ಇದು ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸಿ ಬೆಂಬಲ ಬೆಲೆ ಕಡಿಮೆಯಾಗಲು ಕಾರಣವಾಗುತ್ತಿದೆ. ಹೀಗಾಗಿ ಒಂದೇ ಬೆಂಬಲ ನೀಡುತ್ತಿರುವುದರಿಂದ ರಾಜ್ಯದ ರೈತರಿಗೆ ಅದರಲ್ಲೂ ತುಮಕೂರು ಜಿಲ್ಲೆಯ ರೈತರಿಗೆ ಹೆಚ್ಚು ಅನ್ಯಾಯವಾಗುತ್ತಿದೆ’ ಎನ್ನುತ್ತಾರೆ ಬೆಲೆ ಕಾವಲು ಸಮಿತಿ ಅಧ್ಯಕ್ಷ ಎಸ್.ಗಂಗಾಧರಯ್ಯ.
ಕುಮಾರಸ್ವಾಮಿ ಕೈ ಹಿಡಿಯಲಿದ್ದಾರೆ
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ತೆಂಗು ಬೆಳೆಗಾರರ ಕೈ ಹಿಡಿಯಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕ್ವಿಂಟಲ್ ಕೊಬ್ಬರಿಯ ಬೆಂಬಲ ಬೆಲೆ ಮೇಲೆ ₹ 500 ಪ್ರೋತ್ಸಾಹ ಧನ ನೀಡಿದ್ದರು ಎನ್ನುತ್ತಾರೆ ಜೆಡಿಎಸ್ ವಕ್ತಾರ ಎನ್.ಪಿ.ಮಧುಸೂದನ್. ಬೆಳೆಗಾರರ ಕಷ್ಟಗಳಿಗೂ ಪಕ್ಷ ಧ್ವನಿಯಾಗಿದೆ. ನಮ್ಮ ಶಾಸಕರು ಸದನದಲ್ಲಿ ಧ್ವನಿ ಎತ್ತಿದ್ದಾರೆ. ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.