ದೊಡ್ಡಬಳ್ಳಾಪುರ:ವಕೀಲರಾದ ಮುನಿರಾಜು ಹಾಗೂ ಬೈರೇಗೌಡರ ಅವರನ್ನು ಕೋರ್ಟ್ ಆವರಣದಲ್ಲೇ ಕಕ್ಷಿದಾರರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ನಗರದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿವಕೀಲರು ಪ್ರತಿಭಟನೆ ನಡೆಸಿದರು.
ಹಿರಿಯ ವಕೀಲ ಎ.ಆರ್.ನಾಗರಾಜ್ ಮಾತನಾಡಿ, ಕಕ್ಷಿದಾರರು ಮತ್ತು ವಕೀಲರ ನಡುವೆ ಘರ್ಷಣೆ ನಡೆದಿರುವುದು ಬೇಸರದ ಸಂಗತಿ. ಪ್ರಕರಣ ಒಂದರ ಕುರಿತಂತೆ ಕಕ್ಷಿದಾರ ತಾನೇ ನೇಮಿಸಿದ ವಕೀಲರ ವಿರುದ್ಧ ಅನವಶ್ಯಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಇದು ಅಕ್ಷಮ್ಯ ಎಂದು ಅವರು ಹೇಳಿದರು.
ವಕೀಲರು, ಕಾನೂನಿನ ಅರಿವಿರದ ಜನಸಾಮಾನ್ಯರಿಗೆ ಕಾನೂನು ನೆರವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದಾರೆ. ಅವರ ವಿರುದ್ಧವೇ ದೌರ್ಜನ್ಯ, ಹಲ್ಲೆಯತ್ನ ನಡೆಸಲು ಮುಂದಾಗಿರುವುದಕ್ಕೆ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ ಆರೋಪಿಗಳ ಪರವಾಗಿ ದೊಡ್ಡಬಳ್ಳಾಪುರ ವಕೀಲರು ವಕಲತ್ತು ವಹಿಸುವುದಿಲ್ಲ ಎಂದರು.
ಘಟನೆ ವಿವರ: ತಮ್ಮ ವಕೀಲರಿಗೆ ನಿಂದಿಸುತ್ತಿದ್ದ ವೇಳೆ ಮತ್ತೊಬ್ಬ ವಕೀಲ ಮುನಿರಾಜು ಘರ್ಷಣೆ ತಪ್ಪಿಸಲು ಮಧ್ಯೆಪ್ರವೇಶಿಸಿ ನ್ಯಾಯ ಸಮ್ಮತವಾಗಿ ಸಮಸ್ಯೆ ಬಗೆಹರಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಸಿಟ್ಟಾದ ಕಕ್ಷಿದಾರರಾದ ರಾಜಣ್ಣ, ಬಸವರಾಜು ಏಕಾಏಕಿ ಹಲ್ಲೆಮಾಡಲು ಪ್ರಯತ್ನಿಸಿದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದರು.