ಸೂಲಿಬೆಲೆ ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಟಗರುಗಳನ್ನು ವಿತರಿಸಿ ಪಶು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಜಿ.ಎಂ.ನಾಗರಾಜ್ ಮಾತನಾಡಿ, ‘ಹೊಸಕೋಟೆ ತಾಲ್ಲೂಕಿನ ಕುರಿ ಮತ್ತು ಉಣ್ಣೆ ಉತ್ಪಾದಕರಿಗೆ ಹಾಗೂ ಪ್ರಗತಿಪರ ಕುರಿಗಾಹಿಗಳಿಗೆ ತಳಿ ಸಂವರ್ಧನೆಗಾಗಿ ಅವಳಿ, ತ್ರಿವಳಿ ಮರಿಗಳನ್ನು ನೀಡಬಲ್ಲ ನಾರಿ ಸುವರ್ಣ ಕುರಿ ತಳಿಯ ಟಗರುಗಳನ್ನು ರಿಯಾಯಿತಿ ದರದಲ್ಲಿ ಕರ್ನಾಟಕ ಉಣ್ಣೆ ಅಭಿವೃದ್ಧಿ ನಿಗಮದಿಂದ ನೀಡಲಾಗಿದೆ. ಭಾರತದ ಎಲ್ಲ ತಳಿಯ ಕುರಿಗಳು ಒಂದು ಮರಿ ಮಾತ್ರ ಜನ್ಮ ನೀಡುತ್ತಿದ್ದು, ನಾರಿ ಸುವರ್ಣ ತಳಿಯ ಕುರಿಗಳು ಶೇ 65ರಷ್ಟು ಅವಳಿ ಮರಿಗಳನ್ನು ಶೇ 15ರಷ್ಟು ತ್ರಿವಳಿ ಮರಿಗಳನ್ನು ನೀಡುತ್ತದೆ. ಈ ತಳಿಯ ಟಗರುಗಳನ್ನು ಸ್ಥಳೀಯ ಹೆಣ್ಣು ಕುರಿಗಳೊಂದಿಗೆ ಸಂಕಲನಗೊಳಿಸಿದ್ದಲ್ಲಿ ಎರಡನೇ ತಲೆಮಾರಿನಿಂದ ಈ ಕುರಿಗಳಲ್ಲೂ ಸಹ ಅವಳಿ ಮರಿಗಳನ್ನು ಪಡೆಯಬಹುದಾಗಿದ್ದು ಕುರಿಗಾಹಿಗಳು ಆಸಕ್ತಿ ವಹಿಸಿ ಉತ್ತಮ ರೀತಿಯಲ್ಲಿ ಸಾಕಣೆ ಮಾಡಿ ಹೆಚ್ಚಿನ ಲಾಭ ಪಡೆಯುವಂತಾಗಲಿ’ ಎಂದರು.