ಹೊಸಕೋಟೆ: ಕಾರ್ಮಿಕರ ಭವಿಷ್ಯ ನಿಧಿ ಹಣವನ್ನು ಸಂಬಂಧಪಟ್ಟ ಕಾರ್ಖಾನೆಯ ಮಾಲೀಕರು ಸರಿಯಾಗಿ ಕಟ್ಟದಿದ್ದಲ್ಲಿ ಸ್ಥಳದಲ್ಲಿಯೇ ಶೋಕಾಸ್ ನೋಟೀಸ್ ಜಾರಿ ಮಾಡಲಾಗುವುದು. ಮುಂದಿನ 15 ದಿನಗಳಲ್ಲಿ ಹಣ ಪಾವತಿ ಮಾಡದಿದ್ದಲ್ಲಿ ಕಾರ್ಖಾನೆಯ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ರಾಜ್ಯ ಕಾರ್ಯದರ್ಶಿ ಮಣಿವಣ್ಣನ್ ಹೇಳಿದರು.
ಅವರು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಾರ್ಮಿಕ ಭವಿಷ್ಯನಿಧಿ ಹಾಗೂ ಇ.ಎಸ್.ಐ ಇಲಾಖೆಯ ಸದಸ್ಯರ ಸಭೆಯಲ್ಲಿ ಮಾತನಾಡಿದರು.
‘ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಹಣವನ್ನು ಹಿಂಪಡೆಯಲು ಸರಳವಾಗುವಂತೆ ಆನ್ಲೈನ್ ವ್ಯವಸ್ಥೆಯನ್ನು ಮಾಡಲಾಗಿತ್ತಾದರೂ ಇತ್ತೀಚಿನ ದಿನಗಳಲ್ಲಿ ಅನಕ್ಷರಸ್ಥ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಮೊದಲಿನ ದಾಖಲೆ ಪತ್ರಗಳನ್ನು ಸಲ್ಲಿಸಿ ಬ್ಯಾಂಕ್ ಮುಖಾಂತರ ಹಣ ಪಡೆಯುವ ಪದ್ದತಿಯನ್ನು ಮರು ಜಾರಿಗೊಳಿಸಲಾಗಿದೆ ಎಂದರು. ಈ ಸಂಬಂದ ಪ್ರತಿ ತಿಂಗಳೂ ಸಭೆ ನಡೆಸಿ ಇಲಾಖಾ ಪ್ರಗತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸಭೆಯಲ್ಲಿ ಭಾರತ ಸರ್ಕಾರದ ಭವಿಷ್ಯನಿಧಿ ಸದಸ್ಯರಾದ ನಯೀಮ್ ನೂರ್, ವಿಜಯಕುಮಾರ್, ರಾಜಣ್ಣ, ಹುಸೇನ್, ಕೃಷ್ಣಪ್ಪ ಹಾಗೂ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.