ದೊಡ್ಡಬಳ್ಳಾಪುರ: ನಗರದಂಚಿನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗಿದ್ದು, ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 56 ಪ್ರಕರಣಗಳನ್ನು ಬೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಈ ಸಂಬಂಧ 30 ಆರೋಪಿಗಳನ್ನು ಬಂಧಿಸಿ, ಅವರಿಂದ ₹1 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಬೈಕ್ ಕಳವು, ಸರಗಳ್ಳತ, ಗಾಂಜಾ ಸಾಗಾಣಿಕೆ ಸೇರಿ ವಿವಿಧ ಪ್ರಕರಣಗಳು ಸೇರಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಿನ್ನಾಭರಣ ಬಿಚ್ಚಿಸಿಕೊಂಡು ಪರರಾರಿಯಾಗಿದ್ದ: ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಂಕ್ನಲ್ಲಿ ಸಾಲಕೊಡಿಸುವುದಾಗಿ ನಂಬಿಸಿ ಪುಟ್ಟಮ್ಮ ಎಂಬುವವರ ಬಳಿ ಇದ್ದ ಚಿನ್ನದ ಸರ ಮತ್ತು ಬಳೆಗಳನ್ನು ಮೋಸದಿಂದ ಬಿಚ್ಚಿಸಿಕೊಂಡು ಪರಾರಿಯಾಗಿದ್ದ, ಸಿಂಗನಾಯಕನಹಳ್ಳಿ ನಿವಾಸಿ ಹೊಟ್ಟೆ ಮಂಜ (40) ಎಂಬಾತನನ್ನು ಬಂಧಿಸಿ, ₹25.95 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಧುರೆ ಹೋಬಳಿಯಲ್ಲಿ 40 ಗ್ರಾಂ ಚಿನ್ನದ ಸರ ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ಮಾವಳ್ಳಿಪುರದ ಸಂತೋಷ್ (23) ಎಂಬಾತನನ್ನು ಬಂಧಿಸಿ, ₹2 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಇಸ್ತೂರು ಪಾಳ್ಯದಲ್ಲಿ ಮನೆಯ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಬಳೆ ಹಾಗೂ ಉಂಗುರ ಕಳವು ಪ್ರಕರಣದಲ್ಲಿ ಇದೇ ಗ್ರಾಮದ ಅವಿನಾಶ್ (21) ಎಂಬಾತನನ್ನು ಬಂಧಿಸಿ, ₹8.25 ಲಕ್ಷ ಮೌಲ್ಯದ ಚಿನ್ನದ ಬಳೆ ಹಾಗೂ ಉಂಗುರ ವಶಪಡಿಸಿಕೊಳ್ಳಲಾಗಿದೆ ಎಂದರು.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಲಾರ್ ಸಿಸ್ಟಮ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಉಪನಗರದ ನಿವಾಸಿ ಕಾರ್ತಿಕ್(31), ಹೊನ್ನಾವಳ್ಳಿ ಗ್ರಾಮದ ಯೋಗೀಶ್(32), ಬಂಡವಾಲಪಲ್ಲಿ ಗ್ರಾಮದ ಪ್ರಭಾಕರ್(26), ಮಾವಟೂರು ಗ್ರಾಮದ ಮಧುಸೂದನ್ (29) ಸಾದನಹಳ್ಳಿ ಗಂಗಾರೆಡ್ಡಿ(34) ಎಂಬುವವರನ್ನು ಬಂಧಿಸಿ, ₹15 ಲಕ್ಷ ಮೌಲ್ಯದ ಸೋಲಾರ್ ಸಿಸ್ಟಮ್, ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಎಳ್ಳುಪುರ ಗ್ರಾಮದಲ್ಲಿ ನಡೆದಿದ್ದ ಕಳವು ಪ್ರಕರಣದಲ್ಲಿ ಕಲ್ಲುಕೋಟೆ ಗ್ರಾಮದ ನರಸಿಂಹರಾಜು(24), ಗೌರಿಬಿದನೂರು ತಾಲ್ಲೂಕಿನ ಮರಿಮಾಕನಹಳ್ಳಿ ಗ್ರಾಮದ ಸುಮನ್(21)ಎಂಬುವವರನ್ನು ವಶಕ್ಕೆ ಪಡೆದಿದ್ದು, ₹2.95 ಲಕ್ಷ ಮಾಲ್ಯದ ಚಿನ್ನದ ಮಾಂಗಲ್ಯ ಸರ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಬ್ರಹ್ಮಿ ರೆಸಾರ್ಟ್ ರಸ್ತೆಯಲ್ಲಿ ಗಾಂಜಾ ಸೊಪ್ಪು ಮಾರಾಟದ ಕುರಿತಂತೆ ಹಿಂದೂಪುರ ತಾಲ್ಲೂಕಿನ ಮಾನೆಪಲ್ಲಿ ಗ್ರಾಮದ ಶಿವಪ್ಪ(25)ಎಂಬುವವರನ್ನು ಬಂಧಿಸಿ ₹7 ಲಕ್ಷ ಮೌಲ್ಯದ ಗಾಂಜಾ ಸೊಪ್ಪು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಮೇಡಹಳ್ಳಿ ಗ್ರಾಮದ ಖಾಸಗಿ ಕಾಂಕ್ರೀಟ್ ಮಿಕ್ಸ್ ಪ್ಲಾಂಟ್ನಲ್ಲಿ ಬೆಳೆಯಲಾಗಿದ್ದ ₹2.30 ಲಕ್ಷ ಮೌಲ್ಯದ ಗಾಂಜಾ ಗಿಡವನ್ನು ವಶಪಡಿಸಿಕೊಂಡು ಪಶ್ಚಿಮ ಬಂಗಾಳ ಮೂಲದ ಬಿಸಾರುಲ್ ಶೇಖ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಹಿಂದೂಪುರದಿಂದ ಬೆಂಗಳೂರಿಗೆ ಲಾರಿಗಳ ಮೂಲಕ ಸಾಗಿಸಲಾಗುತ್ತಿದ್ದ ಕಬ್ಬಿಣದ ಕಂಬಿಗಳನ್ನು ಕದ್ದು ಅಕ್ರಮವಾಗಿ ದಾಸ್ತಾನು ಮಾಡಿದ್ದ ₹5 ಲಕ್ಷ ಮೌಲ್ಯದ ಎಂಟು ಟನ್ ಕಂಬಿ ವಶಕ್ಕೆ ಪಡೆಯಲಾಗಿದೆ. ಮಧುಪ್ರಶಾಂತ್, ನಾಗರಾಜು, ಈಶ್ವರ್, ಅಶೋಕ್ ಎಂಬುವವರನ್ನು ಬಂಧಿಸಲಾಗಿದೆ.
ಇದೇ ಸಂದರ್ಭದಲ್ಲಿ ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿದ್ದ ಪೊಲೀಸ್ ಸಿಬ್ಬಂದಿಗೆ ಪ್ರಶಂಶ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್ಪಿ ರವಿ, ವಿವಿಧ ಠಾಣೆಗಳ ಇನ್ಸ್ಪೆಕ್ಟರ್ಗಳಾದ ಅಮರೇಶ್ಗೌಡ, ಮುನಿಕೃಷ್ಣ, ಎಂ.ಆರ್.ಹರೀಶ್, ವೀರೇಂದ್ರಪ್ರಸಾದ್, ದಿಲೀಪ್ಕುಮಾರ್, ಪ್ರವೀಣ್ ಎಸ್.ನಾಯಕ್ ಇದ್ದರು.
ಕದ್ದ ದ್ವಿಚಕ್ರ ವಾಹನ ಮಾರಾಟ
ಕದ್ದ ದ್ವಿಚಕ್ರ ವಾಹನ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೆಳಗಿನಜೂಗಾನಹಳ್ಳಿ ಸುಬ್ರಮಣಿ ಮತ್ತು ರಘು ಅವರಿದ ₹3 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ದ್ವಿಚಕ್ರ ವಾಹನ ಕಳ್ಳರಾದ ಅಮೃತನಗರದ ಚೇತನ್ (19) ಸಾಯಿಪವನ್ (18) ಅವರಿಂದ ₹12.5 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ನಗರದ ರೈಲ್ವೆ ನಿಲ್ದಾಣದ ಸಮೀಪ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಮುಬಾರಕ್ ಎಂಬಾತನನ್ನು ಬಂಧಿಸಿ ₹2 ಲಕ್ಷ ಮೌಲ್ಯದ ಆರು ದ್ವಿಚಕ್ರ ವಾಹನಗಳು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.