ಹೊಸಕೋಟೆ: ಡಬ್ಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಅನುದಾನ ಮಹಾಪೂರ ಹರಿಸಿದ ಪರಿಣಾಮ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ವೇಗ ದೊರೆತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಡಬಲ್ ಎಂಜಿನ್ ಸರ್ಕಾರದಲ್ಲಿ ಸಚಿವ ಎಂಟಿಬಿ ನಾಗರಾಜ್ ನೂರಾರು ಕೋಟಿ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಹೊಸಕೋಟೆಯನ್ನು ರಾಮರಾಜ್ಯ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ವಿಧಾನ ಪರಿಷತ್ ಸದಸ್ಯರಾಗಿ ಸಚಿವರಾಗಿ, ಎಂಬಿಟಿ ನಾಗರಾಜ್ ಅವರು ಜನಪರ ಕಾಳಜಿ ಹೊಂದಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಿಶೇಷ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ’ ಎಂದರು.
ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ‘ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಸಮೀಕ್ಷೆ ಪ್ರಕಾರ ಈಗಾಗಲೇ ಎಂಟಿಬಿ ನಾಗರಾಜ್ ಗೆದ್ದಿದ್ದಾರೆ. ಈ ಬಾರಿ ಬಿಜೆಪಿ ಗೆಲ್ಲುವ ನಿಶ್ಚಿತ. 50 ಸಾವಿರ ಮತಗಳ ಅಂತರದಲ್ಲಿ ಈ ಬಾರಿ ಗೆದ್ದು ವಿಧಾನ ಸಭೆ ಪ್ರವೇಶ ಮಾಡಲಿದ್ದಾರೆ. ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೊಸಕೋಟೆಗೆ ಮೆಟ್ರೋ ರೈಲು ಬರುವುದು ಖಚಿತ’ ಎಂದು ಹೇಳಿದರು.
‘ಕಾಡುಗೋಡಿಯಿಂದ ಹೊಸಕೋಟೆ ನಗರಕ್ಕೆ ಮೆಟ್ರೋ ರೈಲು ಹಾಗೂ ಕಾವೇರಿ ಕುಡಿಯುವ ನೀರಿನ 4 ಹಂತಕ್ಕೆ ₹60 ಕೋಟಿ ಹಣ ನೀಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೂ ಹಲವು ಯೋಜನೆಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ’ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ರಥಯಾತ್ರೆಯಲ್ಲಿ ಮಾಜಿ ಬಿಬಿಎಂಪಿ ಸದಸ್ಯ ನಿತಿನ್ ಪುರುಷೋತ್ತಮ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸತೀಶ್, ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್, ಚಿದಾನಂದ್, ಬಾಲಚಂದ್ರನ್, ಜಯರಾಜ್, ತ.ರಾ ವೆಂಕಟೇಶ್. ಹೇಮಂತ್ ಕುಮಾರ್, ಸುಜಾತ ನಾಗರಾಜ್ ಇದ್ದರು.