ವಿಜಯಪುರ: ಚೆಕ್ಪೋಸ್ಟ್ಗಳಲ್ಲಿವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಗೆ ಇದುವರೆಗೂ ಭತ್ಯೆಯನ್ನು ನೀಡಿಲ್ಲ ಎಂದು ಕೆಲ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷವಾದರೂ ನಮಗೆ ಚುನಾವಣಾ ಕರ್ತವ್ಯ ಭತ್ಯೆ ನೀಡಿಲ್ಲ. ಮತಗಟ್ಟೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಒಮ್ಮೆ ತರಬೇತಿ ಪಡೆದುಕೊಂಡು ಒಂದು ದಿನ ಚುನಾವಣೆ ಮುಗಿಸಿದ ಕೂಡಲೇ ಮತಗಟ್ಟೆಗಳಲ್ಲೇ ಅವರಿಗೆ ಭತ್ಯೆ ನೀಡಿ ಕಳುಹಿಸುತ್ತಾರೆ. ಇದು ಯಾವ ನ್ಯಾಯ. ಎಲ್ಲ ಖರ್ಚು ವೆಚ್ಚಗಳಿಗೂ ಬಿಲ್ ಮಾಡಿಕೊಳ್ಳುತ್ತಾರೆ. ನಮಗೆ ನೀಡಬೇಕಾಗಿರುವ ಭತ್ಯೆಯನ್ನು ನೀಡಲಿಕ್ಕೆ ಅಲಾಟ್ಮೆಂಟ್ ಬರಬೇಕು ಎಂದು ವಿನಾಕಾರಣ ಸತಾಯಿಸುತ್ತಿದ್ದಾರೆ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಮತ್ತೊಬ್ಬ ಅಧಿಕಾರಿ ಮಾತನಾಡಿ, ನಾವು ಚೆಕ್ಪೋಸ್ಟ್ಗಳಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಅಕ್ರಮ ಮದ್ಯ, ಹಣ, ಬಂಗಾರವನ್ನು ಹಿಡಿದು ಪೊಲೀಸ್ ದೂರು ಕೊಟ್ಟು ಕೋರ್ಟ್ಗಳಿಗೆ ಅಲೆದಾಡಿರುವ ಖರ್ಚುಗಳನ್ನಾದರೂ ಕೊಟ್ಟರೂ ಸಾಕು ಎಂದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಹಿಂದೆ ಚುನಾವಣೆಯಲ್ಲಿ ಕೆಲಸ ಮಾಡಿರುವ ಸಿಬ್ಬಂದಿಗೆ ಭತ್ಯೆ ವಿತರಣೆಯಾಗಿಲ್ಲ ಎಂದು ತಿಳಿದು ಬಂದಿದೆ. ಒಂದು ವಾರದಲ್ಲಿ ವಿತರಣೆ ಮಾಡಲಿಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.