ಆನೇಕಲ್ : ಆನೇಕಲ್ ತಾಲ್ಲೂಕಿನಲ್ಲಿ ಬುಧವಾರ ನಡೆದ ಗ್ರಾಮ ಪಂಚಾಯಿತಿ ಫಲಿತಾಂಶದಲ್ಲಿ ಮೂರು ಮಂದಿ ದಂಪತಿ ಚುನಾಯಿತರಾಗಿರುವುದು ವಿಶೇಷ. ತಂದೆ ಮತ್ತು ಮಗಳು ಹಾಗೂ ಮಂಗಳಮುಖಿಯೊಬ್ಬರು ಚುನಾಯಿತರಾಗಿ ಗಮನ ಸೆಳೆದಿದ್ದಾರೆ.
ಕರ್ಪೂರು ಗ್ರಾಮ ಪಂಚಾಯಿತಿಯಲ್ಲಿ ಜ್ಯೋತಿ ಲಕ್ಷ್ಮೀ ಮತ್ತು ಕೆ.ರಾಮು, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಾರಾಯಣಸ್ವಾಮಿ ಮತ್ತು ಭಾವನಾ, ಹಾರಗದ್ದೆ ಗ್ರಾಮ ಪಂಚಾಯಿತಿಯಲ್ಲಿ ರಮೇಶ್ ಮತ್ತು ಗೀತಾ ರಮೇಶ್ ಜಯಗಳಿಸಿದ್ದು ಪತಿ, ಪತ್ನಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಹಾರಗದ್ದೆ ಗ್ರಾಮ ಪಂಚಾಯಿತಿಯಲ್ಲಿ ತಂದೆ ಮತ್ತು ಮಗಳು ಚುನಾಯಿತರಾಗಿದ್ದಾರೆ. ತಂದೆ ವೆಂಕಟೇಶ್ ಮತ್ತು ಮಗಳು ಮಹಾಲಕ್ಷ್ಮೀ ಜಯಗಳಿಸಿದ್ದಾರೆ. ಮಹಾಲಕ್ಷ್ಮೀ ಎಂ.ಕಾಂ ಪದವೀಧರೆಯಾಗಿದ್ದಾರೆ.
ದೊಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ವಾರ್ಡ್ ನಂ.13ರಲ್ಲಿ ಮಂಗಳಮುಖಿ ಆರತಿ ಜವರೇಗೌಡ ಆಯ್ಕೆಯಾಗಿದ್ದಾರೆ.