ಆನೇಕಲ್: ‘ಪೌರ ಕಾರ್ಮಿಕರು ಪಟ್ಟಣದ ಜೀವಾಳವಾಗಿದ್ದಾರೆ. ಮಳೆ, ಗಾಳಿ, ಚಳಿ ಲೆಕ್ಕಿಸದೇ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿಕೊಂಡಿರುವ ಪೌರ ಕಾರ್ಮಿಕರಿಗೆ ಅವಶ್ಯಕ ಸೌಲಭ್ಯ ಕಲ್ಪಿಸುವುದು ಪುರಸಭೆಯ ಜವಾಬ್ದಾರಿಯಾಗಿದೆ’ ಎಂದು ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ತಿಳಿಸಿದರು.
ಪಟ್ಟಣದಲ್ಲಿ ಪುರಸಭೆಯಿಂದ ಪೌರ ಕಾರ್ಮಿಕರಿಗೆ ರೈನ್ಕೋಟ್ ವಿತರಿಸಿ ಅವರು ಮಾತನಾಡಿದರು.
ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರೈನ್ಕೋಟ್ ವಿತರಿಸಲಾಗಿದೆ. ಈ ಹಿಂದೆ ಎಲ್ಲಾ ಪೌರ ಕಾರ್ಮಿಕರಿಗೂ ಸುರಕ್ಷತಾ ಕಿಟ್ ನೀಡಲಾಗಿದೆ. ಪುರಸಭೆಯಿಂದ ಎಲ್ಲಾ ಸೌಲಭ್ಯ ನೀಡಲಾಗುವುದು. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ ಸುಂದರ ಪಟ್ಟಣವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪಟ್ಟಣದ ವಾಣಿಜ್ಯ ಮಳಿಗೆಗಳು ಮತ್ತು ಬೀದಿಬದಿ ವ್ಯಾಪಾರಿಗಳ ಕಸ ಸಂಗ್ರಹಣೆಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಸ್ವಚ್ಛತೆಗೆ ಅಂಗಡಿ ಮಾಲೀಕರು ಸಹಕಾರ ನೀಡಬೇಕು. ಕಸವನ್ನು ಪ್ರತ್ಯೇಕ ವಾಹನದಲ್ಲಿಯೇ ವಿಲೇ ಮಾಡಬೇಕು ಎಂದರು.
ಉಪಾಧ್ಯಕ್ಷೆ ಲಲಿತಾ ಲಕ್ಷ್ಮೀನಾರಾಯಣ್, ಸದಸ್ಯ ರಾಜಪ್ಪ, ಮುಖ್ಯಾಧಿಕಾರಿ ನಟರಾಜ್ ಹಾಜರಿದ್ದರು.