ಹೊಸಕೋಟೆ: ‘ಸಂವಹನಕ್ಕೆ ಭಾಷೆ ಅನಿವಾರ್ಯ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಪಠ್ಯ ಭೋದಿಸುವ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿಅವರು ಮಾತನಾಡಿದರು.
‘ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇಂಗ್ಲಿಷ್ ಹೆಚ್ಚು ಉಪಯೋಗವಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾವಂತರಾಗಿದ್ದರೂ, ನಗರದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಇಂಗ್ಲಿಷ್ ಅನ್ನು ವ್ಯಾವಹಾರಿಕವಾಗಿ ಉಪಯೋಗಿಸಲು ಕಷ್ಟಪಡುತ್ತಾರೆ. ಹಾಗಾಗಿ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡಲು ಪ್ರೋತ್ಸಾಹಿಸಬೇಕು’ ಎಂದರು.
‘ಹೊಸಕೋಟೆ ಕಾಲೇಜು ಉತ್ತಮ ತಂತ್ರಜ್ಞಾನ, ಪರಿಸರ ಹೊಂದಿದ್ದು ಈ ಕಾಲೇಜಿಗೆ ಮುಂದಿನ ದಿನಗಳಲ್ಲಿ ಎಂ.ಎಸ್.ಸಿ ಮತ್ತು ಪಿ.ಎಚ್.ಡಿ. ವಿಭಾಗಗಳನ್ನು ಸೇರಿಸಬೇಕು ಎಂದು ಉಪಕುಲಪತಿಯವರಲ್ಲಿ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಕೆಂಪರಾಜು ಮಾತನಾಡಿ, ‘ಇದು ಬದಲಾವಣೆಯ ಕಾಲ. ಬದಲಾವಣೆ ಮನುಷ್ಯನ ಜೀವನದ ಭಾಗವಾಗಿದೆ. ನಾವು ಅದಕ್ಕೆ ಹೊಂದಿಕೊಳ್ಳಬೇಕು’ ಎಂದರು.
‘ಈಗಿನ ವಿದ್ಯಾಭ್ಯಾಸ ಜೀವನಕ್ಕೆ ಎಷ್ಟು ಉಪಯೋಗ ಎಂದು ಯೋಚಿಸುವಂತಾಗಿದ್ದು, ಮಾಡುವ ಕೆಲಸ ಮತ್ತು ವಿದ್ಯಾಭ್ಯಾಸದ ನಡುವೆ ಹೊಂದಾಣಿಕೆ ಆಗುತ್ತಿಲ್ಲ’ ಎಂದರು.
‘ಈಗ ಉದ್ಯೋಗಕ್ಕಾಗಿ ವಿದ್ಯಾಭ್ಯಾಸ ಎನ್ನುವಂತಾಗಿದೆ. ಉತ್ತಮ ಗುಣಮಟ್ಟವನ್ನು ಜನ ಎಲ್ಲ ರಂಗಗಳಲ್ಲಿಯೂ ನಿರೀಕ್ಷಿಸುತ್ತಾರೆ. ಹಾಗೆಯೇ ವಿದ್ಯಾಭ್ಯಾಸದಲ್ಲೂ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ’ ಎಂದರು.
‘ಪಾಠದ ವಿಧಾನ ಬದಲಾಯಿಸಿಕೊಳ್ಳಬೇಕು. ಉನ್ನತ ತಂತ್ರಜ್ಞಾನ ಉಪಯೋಗಿಸಿ ಮಕ್ಕಳಿಗೆ ಕಲಿಸಬೇಕು ಭಾರತವನ್ನು ವಿಶ್ವ ಗಮನಿಸುತ್ತಿದೆ. ಅದಕ್ಕೆ ಕಾರಣ ನಮ್ಮಲ್ಲಿರುವ ಯುವಜನರು, ಮತ್ತು ಕೌಶಲ. ವಿದ್ಯಾರ್ಥಿಗಳು ತರಗತಿಗಳಿಗಿಂತ ಅದರ ಹೊರಗೆ ಕಲಿಯುವುದು ಬಹಳಷ್ಟಿದೆ’ ಎಂದರು.
ಕಾಲೇಜಿನ ಪ್ರಾಶಂಪಾಲ ಮುನಿ ನಾರಾಯಣಪ್ಪ ಮಾತನಾಡಿದರು. ವಿಶ್ವ ವಿದ್ಯಾಲಯದ ಉಪನ್ಯಾಸಕರಾದ ಕೆ.ಎಸ್.ವೈಶಾಲಿ, ಹರಿಪ್ರಸಾದ್, ದಿವ್ಯದತ್ತ ಇದ್ದರು. 150ಕ್ಕೂ ಹೆಚ್ಚಿನ ಉಪನ್ಯಾಸಕರು ರಾಜ್ಯದ ವಿವಿಧೆಡೆಗಳಿಂದ ಬಂದಿದ್ದರು.