ದೇವನಹಳ್ಳಿ: ‘ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 50ರಷ್ಟು ಸ್ಥಾನ ಗೆಲ್ಲುವ ಗುರಿ ಹೊಂದಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಅನಂತ ಗೆಸ್ಟ್ ಹೌಸ್ನಲ್ಲಿ ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ನಡೆದ ನೂತನ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಗೊಂದಲವಿದೆ. ಹಿಂದೆ ಏನಾಗಿತ್ತು ಎನ್ನುವುದಕ್ಕಿಂತ ಮುಂದೆ ಸಂಘಟನೆ ಮಾಡಬೇಕಾದ ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕು. ಪಕ್ಷ ತಾಯಿ ಇದ್ದಂತೆ. ಹಿರಿಯರ ಮತ್ತು ಕಾರ್ಯಕರ್ತರ ಸಲಹೆ ಪಡೆಯಬೇಕು. ಕಾರ್ಯಕರ್ತರಲ್ಲಿ ಒಂದೊಂದು ಭಿನ್ನ ಅಲೋಚನೆಗಳಿರುತ್ತವೆ’ ಎಂದರು.
‘ಮೂಲ ಕಾಂಗ್ರೆಸ್ ಪಕ್ಷದಿಂದ ಬಂದು ಎರಡೂವರೆ ವರ್ಷ ಕಳೆದಿದೆ. ಬಿಜೆಪಿ ಪಕ್ಷ ಜಿಲ್ಲಾಧ್ಯಕ್ಷ ಸ್ಥಾನದಂತಹ ದೊಡ್ಡ ಜವಬ್ದಾರಿ ನೀಡಿದೆ. ಪುರಸಭೆ ನಗರ ಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನ ದಡಕ್ಕೆ ಸೇರಿಸುವ ಗುರುತರ ಜವಬ್ದಾರಿ ಇದೆ. ರಾಷ್ಟ್ರ ಮತ್ತು ರಾಜ್ಯ ನಾಯಕರ ಸೂಚನೆ ಮೇರೆಗೆ ಚುನಾವಣಾ ತಂತ್ರಗಳನ್ನು ರೂಪಿಸಬೇಕು’ ಎಂದು ಹೇಳಿದರು.
‘ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಿಷ್ಠಾವಂತ ಕಾಯಕರ್ತರಿದ್ದಾರೆ ಎಂಬುದಕ್ಕೆ ಕಳೆದ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಉದಾಹರಣೆ. ಇದರ ಆಧಾರದ ಮೇಲೆ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಲು ವಿವಿಧ ಮೋರ್ಚಾಗಳ ಪದಾಧಿಕಾರಿಗಳ ನೇಮಕ ತಳಮಟ್ಟದಿಂದ ಆಗಬೇಕು. ಶಕ್ತಿ ಕೇಂದ್ರಗಳ ರಚನೆ ಮಾಡಬೇಕು’ ಎಂದು ಹೇಳಿದರು.
‘ದೇಶದಲ್ಲಿ ಬಿಜೆಪಿ ಅಲೆ ಇದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಪಕ್ಷದ ಮುಖಂಡರು ಮಾಡಬೇಕು’ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಸುನೀಲ್, ಪ್ರಧಾನ ಕಾರ್ಯದರ್ಶಿಗಳಾದ ನಿಲೇರಿ ಮಂಜುನಾಥ್, ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಎಸ್ಸಿ ಮೋರ್ಚಾ ತಾಲ್ಲೂಕು ಘಟಕ ಕಾರ್ಯದರ್ಶಿ ಮುನಿಕೃಷ್ಣ, ಅವತಿ ಶಕ್ತಿ ಕೇಂದ್ರ ಅಧ್ಯಕ್ಷ ರಮೇಶ್, ಎಸ್ಸಿ ಮೋರ್ಚಾ ವಿವಿಧ ಘಟಕದ ಪದಾಧಿಕಾರಿಗಳು, ಮುಖಂಡರು ಇದ್ದರು.