ತೂಬಗೆರೆ (ದೊಡ್ಡಬಳ್ಳಾಪುರ): ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯದಿಂದ ಕಂಗಾಲಾಗಿರುವ ತೂಬಗೆರೆ ಸುತ್ತಮುತ್ತಲಿನ ರೈತರು ಸೋಮವಾರ ತೂಬಗೆರೆ ವಿದ್ಯುತ್ ವಿತರಣ ಕೇಂದ್ರದ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.
ಬಿಸಿಲಿನ ತಾಪ ಹೆಚ್ಚಾದ ನಂತರ ಒಂದು ತಿಂಗಳಿನಿಂದಲೂ ಕೃಷಿ ಚಟುವಟಿಕೆಗೆ ಅಗತ್ಯ ಇರುವ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸರ್ಕಾರದ ಮಾರ್ಗ ಸೂಚಿಯಂತೆ ದಿನಕ್ಕೆ 7 ಗಂಟೆ ಅನಿಯಮಿತ ವಿದ್ಯುತ್ ಸರಬರಾಜು ಮಾಡಬೇಕಾಗಿದೆ. ಆದರೆ ಇದನ್ನು ನಿರ್ಲಕ್ಷಿಸಿರುವ ತೂಬಗೆರೆ ಬೆಸ್ಕಾಂ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಾಗಲಷ್ಟೇ ವಿದ್ಯುತ್ ನೀಡುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಸಹಾಯಕ ಎಂಜಿನಿಯರ್ ರೇಣುಕಾರಾಧ್ಯ ಪ್ರತಿಭಟನ ನಿರತ ರೈತರ ಮನವೊಲಿಸಲು ವಿಫಲವಾದರು. ನಂತರ ಹಿರಿಯ ಅಧಿಕಾರಿಗಳು ಪ್ರತಿಭಟನನಿರತ ರೈತರಿಗೆ ಕರೆ ಮಾಡಿ ಮಾತನಾಡಿ, ಸೂಕ್ತ ವಿದ್ಯುತ್ ಸರಬರಾಜಿನ ಬಗ್ಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ದೇವೇಂದ್ರಸ್ವಾಮಿ, ಕೃಷ್ಣಮೂರ್ತಿ, ಹೊಸಹಳ್ಳಿ ಚಂದ್ರಣ್ಣ, ವೆಂಕಟೇಶ್ ಹಾಗೂ ರೈತರು ಭಾಗವಹಿಸಿದ್ದರು.