ವಿಜಯಪುರ: ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೈನುಗಾರಿಕೆಗೆ ಇಲಾಖೆಯ ಅಧಿಕಾರಿಗಳು ಕೊಡುವ ಸಲಹೆಗಳನ್ನು ರೈತರು ಪಾಲನೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ವೀರೇಗೌಡ ಹೇಳಿದರು.
ಹೋಬಳಿಯ ಭಟ್ರೇನಹಳ್ಳಿಯ ಡೇರಿಯ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ದೇವನಹಳ್ಳಿ ವತಿಯಿಂದ ಸೋಮವಾರ ಆಯೋಜಿಸಿದ್ದ ಜಾನುವಾರು ಫಲೀಕರಣ ಶಿಬಿರದಲ್ಲಿ ಅವರು ಮಾತನಾಡಿದರು.
ರೈತರು, ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುವ ಮೂಲಕ ಸಂಘಗಳನ್ನು ಅಭಿವೃದ್ಧಿ ಪಡಿಸಬೇಕು. ರಾಸುಗಳನ್ನು ಕಟ್ಟಿಹಾಕುವ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದೇವನಹಳ್ಳಿಯಲ್ಲೆ ಪರೀಕ್ಷಾ ಕೇಂದ್ರ ಆರಂಭವಾಗಿದ್ದು, ಕೆಲವು ಪೋಷಕಾಂಶಗಳ ಕೊರತೆಯಿಂದಾಗಿ ಹಸುಗಳು ಫಲ ಆಗದಿರಬಹುದು. ಅದನ್ನೇ ನೆಪವಾಗಿಟ್ಟುಕೊಂಡು ರಾಸುಗಳನ್ನು ಮಾರಾಟ ಮಾಡಬೇಡಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಮಾತನಾಡಿ, ಹೈನುಗಾರಿಕೆಯ ಬೆಳವಣಿಗೆಗಾಗಿ ಜಿಲ್ಲಾ ಪಂಚಾಯಿತಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಸುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ರೈತರು ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ ಎಂದರು.
ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಾದರೆ ಗ್ರಾಮೀಣ ಜನರಿಗೆ ಹೈನು ಉದ್ಯಮದಿಂದ ಆರ್ಥಿಕ ಸುಧಾರಣೆಯಾಗುತ್ತದೆ. ರಾಸುಗಳು ಬರಡಾಗಲು ರೈತರ ನಿರ್ಲಕ್ಷ್ಯಕ್ಕೆ ಕಾರಣವಾಗಬಾರದು ಎಂದರು.
ಬಮೂಲ್ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ರಾಸುಗಳ ಸಾಕಾಣಿಕೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಾಲು ಕರೆದ ಕೂಡಲೇ ರಾಸುಗಳು ಮಲಗಲಿಕ್ಕೆ ಬಿಡಬಾರದು. ಇದರಿಂದ ಬ್ಯಾಕ್ಟೀರಿಯಾಗಳು ಮೊಲೆಗಳ ಮೂಲಕ ರಾಸುಗಳ ದೇಹಕ್ಕೆ ಸೇರುತ್ತವೆ ಎಂದು ಎಚ್ಚರಿಸಿದರು.
ಹಾಲು ಕರೆದ ಕೂಡಲೇ ಮೇವು ಕೊಡಬೇಕು. ರಾಸುಗಳಿಗೆ ಬೂಸಾ ಕೊಡಬೇಡಿ ಇದರ ಬದಲಾಗಿ ಫೀಡ್ ಮತ್ತು ಹಿಂಡಿ ಕೊಟ್ಟು ರಾಸುಗಳು ಪೋಷಣೆ ಮಾಡಿ ಎಂದರು.
ವೈಜ್ಞಾನಿಕವಾಗಿ ಪೋಷಿಸಿ: ಬಮೂಲ್ ಉಪವ್ಯವಸ್ಥಾಪಕ ಗಂಗಯ್ಯ ಮಾತನಾಡಿ, ರೈತರು ರಾಸುಗಳನ್ನು ವೈಜ್ಞಾನಿಕವಾಗಿ ಪೋಷಣೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಪಶುಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಮರ್ಪಣಾ ಮನೋಭಾವನೆಯಿಂದ ಕೆಲಸ ಮಾಡಿದರೆ ರೈತರಿಂದ ಉತ್ತಮ ಸ್ಪಂದನೆ ಸಿಗಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಪಶು ವೈದ್ಯ ಇಲಾಖೆಯ ಸಿಬ್ಬಂದಿ ರಾಸುಗಳಿಗೆ ಚಿಕಿತ್ಸೆ ನೀಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ನಾರಾಯಣಸ್ವಾಮಿ, ಡೇರಿ ಅಧ್ಯಕ್ಷ ವೆಂಕಟೇಶಪ್ಪ, ಉಪಾಧ್ಯಕ್ಷ ಭರತ್, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾಚಾರ್, ಗ್ರಾಮ ಪಂಚಾಯಿತಿ ಸದಸ್ಯೆ ಪ್ರಮೀಳಮ್ಮ, ಪಶುಪಾಲನಾ ಇಲಾಖೆಯ ವೈದ್ಯರಾದ ಡಾ.ಜಿ.ಆರ್.ಪ್ರಕಾಶ್, ಡಾ.ರಾಜೇಶ್, ಡಾ.ಕಾಂತರಾಜು, ಡಾ.ಮಂಜುನಾಥ್, ಡಾ.ಧನಂಜಯ, ಡಾ.ವೀಣಾ, ಡಾ.ದಿಲೀಪ್, ಡಾ.ವಸಂತ್ಕುಮಾರ್, ವಿಸ್ತರಣಾಧಿಕಾರಿ ಡಾ.ವಿಶ್ವನಾಥ್, ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಚಿಕ್ಕಣ್ಣ, ವೈಧ್ಯಕೀಯ ಪರೀಕ್ಷಕ ಗೋವಿಂದರಾಜು, ಎ.ನಾಗರಾಜ್, ಸಹಾಯಕ ಖಲೀಲ್, ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.