ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಮಕ್ಕೆ ಮುಂದಾದರೆ ಹೋರಾಟ

ಗಂಗೋನಹಳ್ಳಿ ಭೂವಿವಾದ; ಅಧಿಕಾರಿಗಳ ಜೊತೆ ಮಾಜಿ ಶಾಸಕ ಬಾಲಕೃಷ್ಣ ಚರ್ಚೆ
Last Updated 19 ಜನವರಿ 2021, 1:30 IST
ಅಕ್ಷರ ಗಾತ್ರ

ಮಾಗಡಿ: ತಾಲೂಕಿನ ತಿಪ್ಪಸಂದ್ರ ಹೋಬಳಿ ಗಂಗೋನಹಳ್ಳಿ ಗ್ರಾಮದ ಸುಮಾರು 20 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಈ ಹಿಂದೆ ಮಂಜೂರು ಮಾಡಿದ್ದ ಭೂಮಿಯನ್ನು ಸರ್ಕಾರ ಬಲವಂತದಿಂದ ಹಿಂಪಡೆಯಬಾರದು ಎಂದು ಮಾಜಿ ಶಾಸಕ. ಎಚ್.ಸಿ. ಬಾಲಕೃಷ್ಣ ಆಗ್ರಹಿಸಿದರು.

ಈ ಕುರಿತು ಸೋಮವಾರ ರೈತರ ಸಮ್ಮುಖದಲ್ಲಿ ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಮಾಗಡಿ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಜೊತೆ ಮಾತುಕತೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ನಾನು ಶಾಸಕನಾಗಿದ್ದಾಗ ಕೃಷಿ ಭೂಮಿ ಪಡೆಯಲು ಫಾರಂ ನಂಬರ್ 56 ಪತ್ರಕ್ಕೆ ಅರ್ಜಿ ಹಾಕಿದ ತಾಲೂಕಿನ ಬಹುತೇಕ ರೈತರಿಗೆ ಶಿಫಾರಸು ಮಾಡಿದ್ದೇನೆ. ಈ ಶಿಫಾರಸು ಆಧರಿಸಿ ಕೃಷಿ ಭೂಮಿಗೆ ಹಕ್ಕುಪತ್ರ ನೀಡದೇ ಆ ಭೂಮಿಯನ್ನು ಸಾಮಾಜಿಕ ವಲಯ ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸಿ ಅದನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವುದು ಖಂಡನೀಯ. ಒಂದು ವೇಳೆ ರೈತರನ್ನು ಈ ರೀತಿ ಒಕ್ಕಲೆಬ್ಬಿಸುವ ಕೆಲಸ ಮಾಡಿದರೆ, ಈ ನಿಯಮವನ್ನು ಇಡೀ ಜಿಲ್ಲೆಗೆ ಅನುಸರಿಸಬೇಕು. ಕೇವಲ ಗಂಗೋನಹಳ್ಳಿ ರೈತರಿಗೆ ಮಾತ್ರ ಈ ಕ್ರಮ ಏಕೆ ಎಂದು ಅವರು ಪ್ರಶ್ನಿಸಿದರು.

‘ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಎ. ಮಂಜುನಾಥ ಒತ್ತಡಕ್ಕೆ ಮಣಿದು ಉಪವಿಭಾಗಾಧಿಕಾರಿ ಗಂಗೋನಹಳ್ಳಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಬಂದಿದ್ದರು. ಆದರೆ ಅದಕ್ಕೆ ನಾವು ಅವಕಾಶ ನೀಡಿರಲಿಲ್ಲ. ಉಪವಿಭಾಧಿಕಾರಿ ಕಚೇರಿಗೆ ವಾಪಸ್ ಆಗಿ, ಪೊಸಿಷನ್ ತೆಗೆದುಕೊಂಡಿದ್ದೇನೆ ಎಂಬ ಪತ್ರವನ್ನು ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು. ಜಿಲ್ಲಾಧಿಕಾರಿ ಪೂರ್ವಾಪರ ವಿಚಾರಿಸದೇ ಈ ಪತ್ರಕ್ಕೆ ಸಮ್ಮತಿ ಮುದ್ರೆ ಒತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮಾಗಡಿ ಶಾಸಕರು ನಮಗೆ ಈ ಭಾಗದ ಜನರು ಮತ ಹಾಕಲ್ಲ ಎಂಬ ಕಾರಣಕ್ಕೆ ಇಂತಹ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ನಮ್ಮ ಅಧಿಕಾರ ಅವಧಿಯಲ್ಲಿ ಇಂತಹ ಯಾವ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಿಲ್ಲ’ ಎಂದು ವಿವರಣೆ ನೀಡಿದರು.

‘ರಾಜ್ಯ ಸರ್ಕಾರ ಪಿಟಿಷನ್ ಆ್ಯಕ್ಟ್ ಸಮಿತಿ ರಚಿಸಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಇದ್ದಾರೆ. ಹೀಗಾಗಿ ಮಾಗಡಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವ ಕ್ರಮವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರಿಗೆ ತಿಳಿಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಿ.ಪಂ. ಅಧ್ಯಕ್ಷ ಎಚ್‌.ಎನ್‌. ಅಶೋಕ್, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT