ವಿಜಯಪುರ: ಇಲ್ಲಿನ ಸಂತೆ ಮೈದಾನದ ಬಳಿಯಿರುವ ಪುರಸಭಾ ಅಂಗಡಿ ಮಳಿಗೆಗಳ ಮೇಲಂತಸ್ಥಿಗೆ ಹಚ್ಚಿಹೋಗುವ ಮೆಟ್ಟಿಲುಗಳಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ಗಳು ಹಾಳಾಗಿದ್ದು ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿ ದೇವರಾಜ್ ಒತ್ತಾಯಿಸಿದರು.
’ಪುರಸಭೆಗೆ ಸಂಬಂಧಿಸಿದ ಅಂಗಡಿಗಳನ್ನು ಬಾಡಿಗೆಗೆ ಪಡೆದುಕೊಂಡಿರುವ ವ್ಯಾಪಾರಸ್ಥರು ಸೇರಿದಂತೆ ಇಲ್ಲಿಗೆ ಬರುವ ಗ್ರಾಹಕರು ಮೆಟ್ಟಿಲುಗಳ ಮೂಲಕ ಮೇಲಕ್ಕೆ ಹತ್ತಿಹೋಗಲಿಕ್ಕೆ ತಡೆಯಾಗಿ ನಿರ್ಮಿಸಿದ್ದ ಗ್ರಿಲ್ಗಳು ಹಾಳಾಗಿದ್ದು ಹತ್ತಲಿಕ್ಕೆ ಭಯಪಡುವಂತಾಗಿದೆ‘ ಎಂದರು.
ಆಧಾರ್ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದು, ಪಡಿತರ ಚೀಟಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಿಕ್ಕೆ, ಮಕ್ಕಳನ್ನೂ ಹೊತ್ತುಕೊಂಡು ಮಹಿಳೆಯರು ಬರುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಮೇಲಿನಿಂದ ಕೆಳಗೆ ಬೀಳುವ ಸಂಭವವಿದ್ದು ಅಧಿಕಾರಿಗಳು ಗಮನಹರಿಸಬೇಕು ಎಂದರು.
ಸಂತೆಯೊಳಗೆ ಪ್ರವೇಶ ಮಾಡುವ ದ್ವಾರದಲ್ಲೆ ಕಸದ ರಾಶಿಯನ್ನು ಹಾಕಿ ಹೋಗಿದ್ದಾರೆ. ಇದುವರೆಗೂ ಅದನ್ನು ತೆರವುಗೊಳಿಸಿಲ್ಲ. ಅದನ್ನೂ ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ’ಪುರಸಭೆಗೆ ಸಂಬಂಧಿಸಿದ ಅಂಗಡಿಗಳ ಹರಾಜು ಪ್ರಕ್ರಿಯೆ ನಡೆಸಲಿಕ್ಕೆ ಇನ್ನು ಎಷ್ಟು ತಿಂಗಳ ಕಾಲ ಕಾಲಾವಕಾಶವಿದೆ ಎನ್ನುವ ಕುರಿತು ಕಡತಗಳಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು‘ ಎಂದರು.
ಬಳಿಯಲ್ಲಿ ಮೆಟ್ಟಿಲುಗಳಿಗೆ ಅಳವಡಿಸಿದ್ದ ಗ್ರಿಲ್ ಕಿತ್ತುಹೋಗಿರುವ ಕುರಿತು ಗಮನಕ್ಕೆ ಬಂದಿದೆ ಎಂದರು.
ಸಂತೆ ಮೈದಾನದಲ್ಲಿನ ಶೌಚಾಲಯದ ದುರಸ್ಥಿ ಕಾರ್ಯವೂ ಸೇರಿದಂತೆ ಗ್ರಿಲ್ ಅಳವಡಿಸಲಿಕ್ಕೆ ಕ್ರಿಯಾಯೋಜನೆ ತಯಾರು ಮಾಡಿಕೊಂಡು ಆಡಳಿತಾಧಿಕಾರಿ ಅನುಮೋದನೆ ಪಡೆದುಕೊಂಡ ನಂತರ ಟೆಂಡರ್ ಕರೆದು ಬದಲಾವಣೆ ಮಾಡುತ್ತೇವೆ ಎಂದರು.