ದೇವನಹಳ್ಳಿ: ‘ವಿಶ್ವದಲ್ಲಿನ ಅನೇಕ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯಕ್ಕಾಗಿ ರಕ್ತಕ್ರಾಂತಿ ನಡೆದಿದ್ದರೂ ಭಾರತಕ್ಕೆ ಆಹಿಂಸಾ ಮಾರ್ಗದ ಚಳವಳಿ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿ ವಿಶ್ವಕ್ಕೆ ಮಾದರಿಯಾದರು’ ಎಂದು ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ಸೂ.ರಂ.ರಾಮಯ್ಯ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ವೋದಯ ಮಂಡಳಿ, ಬಿ.ಕೆ.ಎಸ್. ಪ್ರತಿಷ್ಠಾನ ಮತ್ತು ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ ‘ಗಾಂಧೀಜಿ ಅವರ ಮೌಲ್ಯ ಮತ್ತು ಮಾರ್ಗಗಳು’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗಾಂಧೀಜಿ ಅವರು ಲಂಡನ್ಲ್ಲಿ ವಕೀಲ ವೃತ್ತಿಯಲ್ಲಿ ಇದ್ದ ಸಂದರ್ಭದಲ್ಲಿ ಬಿಳಿಯರಿಂದ ಅನುಭವಿಸಿದ ಅವಮಾನದಿಂದ ತತ್ತರಿಸಿದ್ದ ಕಾಲಘಟ್ಟದಲ್ಲಿ 1915ರಲ್ಲಿ ಸ್ವದೇಶಕ್ಕೆ ಮರಳಿ ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡುಗಡೆಗೊಳಿಸಲು ಆಹಿಂಸಾ ಚಳವಳಿ ಏಕೈಕ ಅಸ್ತ್ರ ಎಂಬುದನ್ನು ಮನಗಂಡು ದೃಢಸಂಕಲ್ಪ ಮಾಡಿದರು’ ಎಂದು ಹೇಳಿದರು.
’ಸ್ವದೇಶ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಚಳವಳಿಗೆ ಕರೆ ನೀಡಿದ ಸಂದರ್ಭದಲ್ಲಿ ಗಾಂಧೀಜಿ ಸೇರಿದಂತೆ ನಾನು ಸಹ 1942ರಲ್ಲಿ ಜೈಲಿಗೆ ಸೇರಿದ್ದೆ. ಭಾರತದ ಏಕತೆಗಾಗಿ ನಡೆಸಿದ ಹೋರಾಟ ಅವರ ನಡೆನುಡಿ, ಸ್ವಭಾವ ತೀರ ಹತ್ತಿರದಿಂದ ಕಂಡಿದ್ದು ಕಣ್ಮುಂದೆ ಇದೆ’ ಎಂದು ನೆನಪು ಮಾಡಿಕೊಂಡರು.
ಕರ್ನಾಟಕ ಸರ್ವೋದಯ ಮಂಡಳಿ ಅಧ್ಯಕ್ಷ ಎಲ್. ನರಸಿಂಹಯ್ಯ ಮಾತನಾಡಿ, ‘ಗಾಂಧಿ ಪ್ರತಿಮೆಗೆ, ಭಾವಚಿತ್ರಕ್ಕೆ ಹಾರಹಾಕಿ ಪೂಜೆ ಸಲ್ಲಿಸಿದರೆ ಪ್ರಯೋಜಿನವಿಲ್ಲ, ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸರ್ವೋದಯ ಮಂಡಳಿ ಕೋಶಾಧ್ಯಕ್ಷ ಯ.ಚಿ. ದೊಡ್ಡಯ್ಯ ಮಾತನಾಡಿ, 2018 ಅ.2 ರಿಂದ ರಾಜ್ಯ ಸರ್ಕಾರ ಬಾ–ಬಾವು 150 ನೇ ವರ್ಷಾಚರಣೆ ಪ್ರಯುಕ್ತ ಈ ವರೆಗೆ 125 ಶಾಲೆ, 25 ಕಾಲೇಜುಗಳಲ್ಲಿ ಗಾಂಧೀಜಿ ವಿಚಾರಧಾರೆ ಅವರ ಚಳವಳಿ ಸಾಗಿ ಬಂದ ರೀತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಾಂಶುಪಾಲ ಶಿವಶಂಕರಯ್ಯ, ಗಾಂಧಿ ಅಧ್ಯಯನ ಕಾಲೇಜು ಸಂಚಾಲಕಿ ನೀರಿಜಾ ದೇವಿ, ಸರ್ವೋದಯ ಮಂಡಳಿ ಕಾರ್ಯದರ್ಶಿ ಸುರೇಶ್, ಬಿ.ಕೆ.ಎಸ್.ಪ್ರತಿಷ್ಠಾನ ಅಧ್ಯಕ್ಷ ಬಿ.ಕೆ.ಶಿವಪ್ಪ, ಮುಖಂಡ ಲಕ್ಷ್ಮೀನಾರಾಯಣ್, ವೆಂಕಟರಾಜು, ಉಪಾನ್ಯಾಸಕ ರವಿಕುಮಾರ್ ಇದ್ದರು.