ವಿಜಯಪುರ: ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿ ರಚಿಸಿದ ನಾಟ್ಯ ಶಾಸ್ತ್ರವಿದು ಎಂದು ಧಾರ್ಮಿಕ ಮುಖಂಡ ಕೆಂಪರೆಡ್ಡಿ ಹೇಳಿದರು.
ಸಾಯಿನಾಥ ಜ್ಞಾನಮಂದಿರದಲ್ಲಿ ಶಿರಡಿ ಸಾಯಿಬಾಬಾ ಸಮಾಧಿ ಶತಮಾನೋತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ಗೀತಗಾಯನದಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಹೆಚ್ಚಿನ ಎಲ್ಲ ನೃತ್ಯ ಹಾಗೂ ಸಂಗೀತ ಪ್ರಕಾರಗಳು ಭಕ್ತಿಯನ್ನಾಧರಿಸಿವೆ. ಕರ್ನಾಟಕ ಸಂಗೀತದ ಬೇರುಗಳು ಭಕ್ತಿ ರಸದಲ್ಲಿ ಆಳವಾಗಿ ಬೇರೂರಿವೆ. ಭರತನಾಟ್ಯವನ್ನು ಸಂಗೀತದ ದೃಶ್ಯ ರೂಪಕ ಎಂತಲೂ ಕರೆಯುತ್ತಾರೆ ಎಂದರು.
ಭಾರತೀಯ ಆಡಳಿತಗಾರರು ಮಾಡಿದಂತೆ ಸಾಂಪ್ರದಾಯಿಕವಾಗಿ ನಿರ್ವಹಿಸುವ ಹಲವು ಹಿಂದೂ ದೇವಾಲಯಗಳು, ತರಬೇತಿ ಹೊಂದಿದ ಸಂಗೀತಗಾರರು ಮತ್ತು ನೃತ್ಯಗಾರರನ್ನು ಪೋಷಿಸಿವೆ. ಇಂತಹ ಕಲೆಯನ್ನು ಪೋಷಿಸಿ ಬೆಳೆಸಬೇಕಾಗಿರುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ಮುಖಂಡ ಸುಬ್ಬಾರೆಡ್ಡಿ ಮಾತನಾಡಿ, ಸಂಗೀತ, ಚಲನೆ, ಲಯ ಮತ್ತು ಅಭಿವ್ಯಕ್ತಿಯ ಸಂಯೋಜನೆಯೇ ನೃತ್ಯ. ಪ್ರಾದೇಶಿಕ ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಗಳ ಸಮ್ಮಿಶ್ರ ಕಲೆಯೂ ಹೌದು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳು ವೈವಿಧ್ಯವೂ, ವಿಶಿಷ್ಟವೂ ಆಗಿವೆ ಎಂದರು.
ದೇವಾಲಯದ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೆ.ಮಂಜುನಾಥ್, ನಾರಾಯಣಸ್ವಾಮಿ, ಸುರೇಶ್, ಕಂಪನಿ ದೇವರಾಜ್, ಸೀತಾರಾಮ ರೆಡ್ಡಿ, ಜೆ.ಎಂ. ಮಂಜುನಾಥ್, ಅಮರ್, ವೆಂಕಟರಾಂ ಇದ್ದರು.