ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಕೊಡಿ

ಶಿಕ್ಷಕರ– ಆಡಳಿತ ಮಂಡಳಿಗಳ ವೇದಿಕೆ ಒತ್ತಾಯ
Last Updated 9 ಜುಲೈ 2020, 16:44 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೋವಿಡ್-19 ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲಾ ಕಾಲೇಜು ಶಿಕ್ಷಕ ನೆರವಿಗೆ ಬಾರದ ಸರ್ಕಾರ ಜುಲೈ 13ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಆದೇಶ ನೀಡುವ ಯಾವುದೇ ನೈತಿಕ ಹಕ್ಕು ಶಿಕ್ಷಣ ಸಚಿವರಿಗೆ ಇಲ್ಲ ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿಗಳ ವೇದಿಕೆ, ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಜುಲೈ 11ರ ಒಳಗೆ ಶಿಕ್ಷಕರಿಗೆ ಆರ್ಥಿಕ ನೆರವು ಹಾಗೂ ವೈದ್ಯಕೀಯ ಪ್ಯಾಕೇಜ್ ನೀಡದಿದ್ದರೆ ಶಿಕ್ಷಕರು ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಕೋವಿಡ್-19 ಲಾಕ್‍ಡೌನ್ ಕಾರಣದಿಂದಾಗಿ ಬಹಳಷ್ಟು ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ 3 ತಿಂಗಳಿನಿಂದ ಸಂಬಳ ನೀಡಿಲ್ಲ. ಶಿಕ್ಷಕರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದರು.

‘ಇತ್ತೀಚೆಗಷ್ಟೇ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಹಠಕ್ಕೆ ಬಿದ್ದು ನಡೆಸಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿಯೇ ಪರೀಕ್ಷೆ ಎದುರಿಸಿದ್ದಾರೆ. ಶಿಕ್ಷಕರ ನೆರವಿಗೆ ಬಾರದ ಸರ್ಕಾರ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಂತೆ ಆದೇಶಿಸಿರುವುದು ಎಷ್ಟು ಸರಿ. ಇತ್ತೀಚೆಗೆ ನಡೆದ ಪಿಯುಸಿ ಮೌಲ್ಯಮಾಪನದ ವೇಳೆ ನೂರಾರು ಕಿ.ಮೀ ದೂರದಿಂದ ಬೆಂಗಳೂರಿಗೆ ಉಪನ್ಯಾಸಕರು ಆಗಮಿಸಿದ್ದರು. ಈಗ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಮಾಡಲು ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಒಂದೆಡೆ ಸೇರುತ್ತಾರೆ. ಆದರೆ ಶಿಕ್ಷಕರಿಗೆ ಯಾವುದೇ ವೈದ್ಯಕೀಯ ಭದ್ರತೆ ಇಲ್ಲ. ಶಾಲಾ ಶಿಕ್ಷಕರಿಗೆ ಈ ವೇಳೆ ಕೊರೊನಾ ವೈರಸ್‌ ಸೋಂಕು ತಗುಲಿದರೆ ಯಾರು ಹೊಣೆ’ ಎಂದರು.

‘ಖಾಸಗಿ ಶಾಲೆಗಳಿಗೆ ಸರ್ಕಾರ ಬಾಕಿ ಇರಿಸಿಕೊಂಡಿರುವ ಸುಮಾರು ₹ 1,025 ಕೋಟಿ ಆರ್‌ಟಿಇ ಹಣವನ್ನು ಕೂಡಲೇ ಬಿಡುಗಡೆ ಮಾಡಿದರೆ ಶಾಲೆಗಳಿಗೆ ಸಹಕಾರಿಯಾಗುತ್ತದೆ. ಶಿಕ್ಷಕರಿಗೆ ಈ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಶಿಕ್ಷಕರಿಗೆ ವೈದ್ಯಕೀಯ ವಿಮೆ ಒದಗಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ’ ಎಂದರು.

ರಾಜ್ಯದಲ್ಲಿ ಸುಮಾರು 2.5 ಲಕ್ಷ ಶಿಕ್ಷಕರಿದ್ದಾರೆ. ಇದರಲ್ಲಿ ಶಾಲಾ ಆಡಳಿತ ಮಂಡಳಿತ ಒತ್ತಡಕ್ಕೆ ಮಣಿದಿರುವ ಕೆಲವೇ ಜನ ಶಿಕ್ಷಕರನ್ನು ಹೊರತುಪಡಿಸಿ ಬಹಳಷ್ಟು ಶಿಕ್ಷಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಕಾರ್ಯದರ್ಶಿ ಸೂಡಿ ಸುರೇಶ್, ಜಂಟಿ ಕಾರ್ಯದರ್ಶಿ ಟಿ.ಕೆ.ನರಸೇಗೌಡ, ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೋಹನ್‌ನಾಯಕ್, ಪ್ರಧಾನ ಸಂಚಾಲಕ ದಾದಾಪೀರ್ ಇದ್ದರು.

ಮೌಲ್ಯಮಾಪನ ಬಹಿಷ್ಕಾರ ಎಚ್ಚರಿಕೆ

‘ತಾಲ್ಲೂಕು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು 4 ರಿಂದ 5 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ. ಖಾಸಗಿ ಆಡಳಿತ ಮಂಡಳಿಗಳು ಶಿಕ್ಷಕರಿಗೆ ಸಂಬಳ ನೀಡದೇ ಶಿಕ್ಷಕರು ಅನ್ಯ ಉದ್ಯೋಗಗಳತ್ತ ತೆರಳಬೇಕಿದೆ. ಆದರೆ ಸರ್ಕಾರಿ ಶಾಲೆಯ ಶಿಕ್ಷಕರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಬೇಕು. ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ದಿಸೆಯಲ್ಲಿ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಹಾಗೂ ವೈದ್ಯಕೀಯ ವಿಮೆಯ ಬೇಡಿಕೆಗಳು ಈಡೇರದಿದ್ದರೆ ಜುಲೈ 13ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT