ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ರಾಗಿ ಬೆಳೆ: ರೈತರಲ್ಲಿ ಸಂತಸದ ಕಳೆ

Last Updated 2 ನವೆಂಬರ್ 2019, 13:48 IST
ಅಕ್ಷರ ಗಾತ್ರ

ವಿಜಯಪುರ: ತೀವ್ರ ಬರಗಾಲದಿಂದ ಬಸವಳಿದಿದ್ದ ರೈತರ ಪಾಲಿಗೆ ಉತ್ತಮ ಮಳೆ ನೆಮ್ಮದಿ ತಂದಿದ್ದು, ರಾಗಿ ಪೈರು ಹುಲುಸಾಗಿ ಬೆಳೆದಿರುವ ಕಾರಣ ರೈತರು ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದಾರೆ.

ಸತತವಾಗಿ ಏಳು ವರ್ಷಗಳಿಂದ ಮಳೆ ಇಲ್ಲದೆ ಮುಂಗಾರು, ಹಿಂಗಾರು ಬೆಳೆಗೆ ಹಾನಿಯಾಗಿತ್ತು. ಈ ಬಾರಿಯೂ ಹೀಗಾದರೆ ಮುಂದೇನು ಎಂಬ ಚಿಂತೆ ರೈತರಿಗಿತ್ತು. ಆದರೆ ಇದೀಗ ಉತ್ತಮ ಮಳೆ ಬಿದ್ದಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ.

ಜುಲೈ ಅಂತ್ಯ, ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ರಾಗಿ, ಸಾಸಿವೆ ಮುಂತಾದ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ಬಳಿಕ ಆಗಸ್ಟ್ ಅಂತ್ಯ ಮತ್ತು ಸೆಪ್ಟೆಂಬರ್ ಮೊದಲ ಎರಡು ವಾರಗಳ ಮಧ್ಯೆ ಮಳೆ ಇಲ್ಲದೆ ರಾಗಿ ಪೈರು ಒಣಗಲಾರಂಭಿಸಿತ್ತು. ಒಣಗುವ ಹಂತದಲ್ಲಿದ್ದ ರಾಗಿ ಬೆಳೆ ಇದೀಗ ಮಳೆ ಸುರಿದ ಪರಿಣಾಮ ಹಸಿರಿನಿಂದ ನಳನಳಿಸುತ್ತಿದ್ದು, ಕಾಳುಗಟ್ಟುವ ಹಂತದಲ್ಲಿದೆ. ಇನ್ನು ಒಂದೂವರೆ ತಿಂಗಳಲ್ಲಿ ರಾಗಿ ಬೆಳೆ ಕೈಸೇರುವ ಸಂಭ್ರಮದಲ್ಲಿದ್ದಾರೆ ರೈತರು.

ಸ್ವಾತಿ, ವಿಶಾಖ ಮಳೆ ಭಯ: ಈ ಬಾರಿ ಬಿತ್ತನೆ ಮಾಡಿದ ಬೆಳೆಗಳಿಗೆ ಉತ್ತರೆ ಮತ್ತು ಹಸ್ತ (ಅತ್ತೆ) ಮಳೆ ಉತ್ತಮವಾಗಿ ಬಿದ್ದಿರುವ ಪರಿಣಾಮ ರಾಗಿ ಸೇರಿದಂತೆ ಇನ್ನಿತರ ಬೆಳೆಗಳು ಹೊಲಗಳಲ್ಲಿ ಹಚ್ಚ ಹಸಿರಿನಿಂದ ಬೆಳೆದು ನಿಂತಿವೆ. ಮುಂದೆ ಬರಲಿರುವ ಸ್ವಾತಿ ಮಳೆ ಹೆಚ್ಚು ದಿನಗಳ ಕಾಲ ಜಡಿ ಮಳೆ ಹಿಡಿದರೆ ರಾಗಿ ಬೆಳೆಗೆ ತಡೆಯೊಡ್ಡಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಬಹುದು. ಹಾಗಾಗಿ ಸ್ವಾತಿ, ವಿಶಾಖ ಮಳೆ ಭಯ ರೈತರನ್ನು ಕಾಡುತ್ತಿದೆ.

ನೀರು, ಮೇವಿನ ಕೊರತೆ ಇಲ್ಲ: ಮಳೆ ಇಲ್ಲದೆ ಇದ್ದಾಗ ಮೇವಿನ ಬೆಲೆ ಗಗನಮುಖಿಯಾಗಿತ್ತು. ಒಂದು ಹೊರೆ ಹುಲ್ಲಿಗೆ ₹ 500 ದರ ಇತ್ತು. ಹಾಗಾಗಿ ಮೇವಿಲ್ಲದೆ ರೈತರು ಜಾನುವಾರಗಳನ್ನು ಮಾರಾಟ ಮಾಡಿದ್ದರು. ಈಗ ರಾಗಿ ಬೆಳೆ ಚೆನ್ನಾಗಿ ಬಂದಿದೆ. ಹದವಾಗಿ ಮಳೆಯಾಗುತ್ತಿರುವುದರಿಂದ ಬದುಗಳಲ್ಲಿ ಹಸಿರು ಮೇವು ಸೊಂಪಾಗಿ ಬೆಳೆಯಲಾರಂಭಿಸಿದೆ. ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚುತ್ತಿದೆ. ಸದ್ಯಕ್ಕೆ ನೀರು, ಮೇವಿಗೆ ಕೊರತೆ ಇಲ್ಲ. ಹೀಗೆ ಹದವಾಗಿ ಮಳೆಯಾದರೆ ಶೇ 90ರಷ್ಟು ರಾಗಿ ಬೆಳೆಯ ನಿರೀಕ್ಷೆ ಇದೆ.

ಸಿರಿಧ್ಯಾನ್ಯಗಳೂ ಸಮೃದ್ಧಿ: ಮಳೆ ಸುರಿಯುವುದು ತಡವಾದರೂ ಇರುವ ಬೆಳೆಗಳು ಸದ್ಯಕ್ಕೆ ಚೆನ್ನಾಗಿವೆ. ಮುಂದೆ ಸಮಯಕ್ಕೆ ಸರಿಯಾಗಿ ಮಳೆಯಾದರೆ ತೊಂದರೆ ಇಲ್ಲ. ವರ್ಷದ ಕಾಳು ಮನೆಗೆ ಬರುತ್ತದೆ. ಅವರೆಕಾಯಿ ಗಿಡಗಳು ಹುಲುಸಾಗಿ ಬೆಳೆದಿವೆ. ರೈತರು ಸಾಂಪ್ರದಾಯಿಕವಾಗಿ ರಾಗಿ ಹೊಲಗಳಲ್ಲಿ ಅವರೆ, ಹುಚ್ಚೆಳ್ಳು, ಸಾಸಿವೆ, ಬಿಳಿಜೋಳ, ಅರೆ, ಸಾಮೆ, ನವಣೆ, ಸಜ್ಜೆ ಮುಂತಾದ ಬೆಳೆಗಳನ್ನು ಸಾಲುಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗಳು ಕೂಡಾ ಈ ಬಾರಿ ಸಮೃದ್ಧಿಯಾಗಿ ಬೆಳೆದಿವೆ ಎಂದು ರೈತ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT