ದೇವನಹಳ್ಳಿ: ಕರಾವಳಿ ಭಾಗದಿಂದ ನೀರು ತರಲು ಸರ್ಕಾರಕ್ಕೆ ಆಸಕ್ತಿ ಇಲ್ಲ, ಉಡುಪಿ ಪೇಜಾವರ ಶ್ರೀಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರನ್ನು ಎದುರಿಸಲು ಸದಾನಂದಗೌಡ ಮತ್ತು ಮೊಯಿಲಿಗೆ ಅವರಿಗೆ ಸಾಧ್ಯವಿಲ್ಲ. ಅವರಿಬ್ಬರು ದಕ್ಷಿಣ ಕನ್ನಡ ಬಿಟ್ಟು ಈ ಕಡೆಗೆ ಓಡಿಬಂದವರು ಎಂದು ಎಂದು ಪ್ರಾಂತ ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ಇಲ್ಲಿನ ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯಲು ಸೀಮೆಗೆ ಕುಡಿಯುವ ನೀರಿಗಾಗಿ ಮೊದಲು ಹೋರಾಟ ನಡೆಸಿದ್ದು ಸಿಪಿಎಂ ಪಕ್ಷ. ನೀರಾವರಿ ತಜ್ಞ ಪರಮಶಿವಯ್ಯ ಅವರ ಸಮಗ್ರ ವರದಿ ಸಂಪೂರ್ಣವಾಗಿ ಬಳಸಿಕೊಂಡು, ಶಾಶ್ವತ ಯೋಜನೆಗೆ ಸರ್ಕಾರ ಕೈಹಾಕಬೇಕಾಗಿತ್ತು ಎಂದರು.
ವರದಿಯಲ್ಲಿನ ಒಂದು ಭಾಗದನ್ವಯ ಎತ್ತಿನ ಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. 24 ಟಿ.ಎಂ.ಸಿ ನೀರು ಬರಲು ಸಾಧ್ಯವೇ ಇಲ್ಲ. 2 ಸಾವಿರ ಟಿ.ಎಂ.ಸಿ ಮೂರು ಭಾಗದಿಂದ ತರಬಹುದಿತ್ತು. ಕನಿಷ್ಠ 168 ಟಿ.ಎಂ.ಸಿ ನೀರು ಬಯಲು ಸೀಮೆಗೆ ಬೇಕು ಎಂದರು.
ಕೃಷ್ಣ ಬಿ. ಸ್ಕಿಂ ಯೋಜನೆಯಡಿ ಶೇ. 40ರಷ್ಟು ನೀರನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಶೇಕಡ 75 ರಷ್ಟು ಬಳಕೆ ಮಾಡುವ ಅವಕಾಶವಿದೆ, ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಸರ್ಕಾರ ಕೊಟ್ಯಾಂತರ ವೆಚ್ಚ ಮಾಡಿ ಕೊಳಕು ನೀರು ಹರಿಸಲು ಮುಂದಾಗಿದೆ, ಭವಿಷ್ಯದಲ್ಲಿ ಇದು ಮಾರಕವಾಗಲಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ, ಪ್ರಧಾನಿ ನರೇಂದ್ರ ಮೊದಿ 15 ಕೊಟ್ಯಧಿಪತಿ ಕುಟುಂಬಗಳ ಸಾಲದ ಬಡ್ಡಿ ಮನ್ನಾ ಮಾಡುತ್ತಾರೆ. ರೈತರ ಸಾಲ ಮನ್ನಾ ಮಾಡುವ ಮನಸ್ಸು ಇಲ್ಲ, ದೇಶದಲ್ಲಿ ಅಭದ್ರತೆ ಹೆಚ್ಚುತ್ತಿದೆ ಗುಂಪು ದಾಳಿ ನಿರಂತರವಾಗುತ್ತಿದೆ ಎಂದರು.
ಸೈನಿಕರು ದೇಶವನ್ನು ಕಾಯುತ್ತಿದ್ದಾರೆ ಹೊರತು ಬಿಜೆಪಿಯವರನ್ನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಉಗ್ರ ಮಸೂದ್ನನ್ನು ಬಿಟ್ಟಿದ್ದು ಬಿಜೆಪಿ, ದೇಶ ಮೊದಲು ಎನ್ನುವ ಇವರಿಗೆ ಏನನ್ನು ಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ದೂರಿದರು.
ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲಕೃಷ್ಣ ಮಾತನಾಡಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಐದು ವರ್ಷಗಳ ಹಿಂದೆ ಬಿಜೆಪಿ ನೀಡಿದ ಯಾವುದೆ ಒಂದು ಭರವಸೆ ಈಡೇರಿಲ್ಲ, ಸ್ಥಳೀಯ ಅಭ್ಯರ್ಥಿ ಮೊದಿ ಮುಖನೋಡಿ ಮತಹಾಕಿ ಎನ್ನುತ್ತಿದ್ದಾರೆ ಎಂದರು.
ಮೊಯಿಲಿ ಮತ್ತು ಬಿ.ಎನ್. ಬಚ್ಚೇಗೌಡರ ಅಸ್ತಿ ಕೋಟಿ ಲೆಕ್ಕದಲ್ಲಿದೆ, ಸಿಪಿಎಂ ಅಭ್ಯರ್ಥಿ ವರಲಕ್ಷ್ಮಿ ಹೋರಾಟ ಮಾಡಿ ಹಾಕಿಸಿಕೊಂಡ ಐದು ಕ್ರಿಮಿನಲ್ ಪ್ರಕರಣಗಳಿವೆ. ಹುಟ್ಟು ಹೋರಾಟಗಾರ್ತಿ ವರಲಕ್ಷ್ಮಿಗೆ ಮತದಾರರು ಚಿಂತಿಸಿ ಮತ ನೀಡುತ್ತಾರೆ ಎಂದು ಹೇಳಿದರು. ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್. ವೀರಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.