ಆನೇಕಲ್:ಪಟ್ಟಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜಲಾಂಛನ ಸಂಸ್ಥೆಯಿಂದ ಉಚಿತ ತರಬೇತಿ ಮತ್ತು ಮಾರ್ಗದರ್ಶನ ನೀಡಿ ಪರೀಕ್ಷೆಗೆ ಸಜ್ಜುಗೊಳಿಸುವ ಕಾರ್ಯಕ್ರಮದ ಸಮಾರೋಪವು ಶನಿವಾರ ನಡೆಯಿತು.
ಸರ್ಕಲ್ ಇನ್ಸ್ಪೆಕ್ಟರ್ ಮಹಾನಂದ್ ಮಾತನಾಡಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಉತ್ಸಾಹ ಕಳೆದುಕೊಳ್ಳಬಾರದು. ಸತತ ಪ್ರಯತ್ನ, ಅಧ್ಯಯನ ಮಾಡುವುದರಿಂದ ಉನ್ನತವಾದುದ್ದುನ್ನು ಸಾಧಿಸಬಹುದು. ಹಾಗಾಗಿ, ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಸವಾಲು ಸ್ವೀಕರಿಸಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ರಾಜಲಾಂಛನ ಸಂಸ್ಥೆಯ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸರ್ಕಲ್ ಇನ್ಸ್ಪೆಕ್ಟರ್ ಎಲ್.ವೈ. ರಾಜೇಶ್ ಅವರ ಸಲಹೆಯಂತೆ ಜಿಗಣಿ ರಾಜಲಾಂಛನ ಘಟಕವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಹಮ್ಮಿಕೊಂಡಿದ್ದ ಉಚಿತ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಎನ್. ಶ್ರೀನಿವಾಸ್, ಶಿಕ್ಷಕರಾದ ಚಂದ್ರಶೇಖರ್, ಭಾಗ್ಯಾ, ಲಲಿತಾ, ರವಿಚಂದ್ರ, ನಾರಾಯಣ್, ಅನಿತಾ ಅವರನ್ನು ಸನ್ಮಾನಿಸಲಾಯಿತು.
ಜಿಗಣಿ ಘಟಕದ ಅಧ್ಯಕ್ಷ ತೆಲಗರಹಳ್ಳಿ ಗಣೇಶ್, ಕಾರ್ಯದರ್ಶಿ ಮಂಜುನಾಥ ನಂದಿ, ಪದಾಧಿಕಾರಿಗಳಾದ ರೋಹಿಣಿ ವೆಂಕಟೇಶ್, ಸೋಮಶೇಖರ್, ವಸಂತ್, ಶೇಖರ್, ಚೆಲುವರಾಜು, ರುದ್ರೇಶ್ ಗೌಡ, ತಿರುಪಾಳ್ಯ ಮಂಜು, ಸಂಪತ್, ಲಿಂಗರಾಜು ಹಾಜರಿದ್ದರು.