ವಿಜಯಪುರ: ಇಲ್ಲಿನ ಹರಿಹರ ಸಂಗಮ ಕ್ಷೇತ್ರವೆಂದು ಖ್ಯಾತಿ ಪಡೆದುಕೊಂಡಿರುವ ನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಶ್ರೀಮತ್ಕಲ್ಯಾಣೋತ್ಸವ ಕಾರ್ಯಕ್ರಮ ಏ.18 ರಂದು ಆರಂಭವಾಗಿ ಏ. 21 ರವರೆಗೆ ನಡೆಯಲಿದೆ ಎಂದು ಬ್ರಹ್ಮರಥೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ದಿನೇಶ್ ಹೇಳಿದರು.
ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಏ.18 ರಂದು ಪ್ರಧಾನ ಹೋಮಗಳು, ಗಿರಿಜಾ ಕಲ್ಯಾಣೋತ್ಸವ, ತಿರುಕಲ್ಯಾಣೋತ್ಸವ ದಾಸೋಹ ಕಾರ್ಯಕ್ರಮಗಳು ನಡೆಯಲಿವೆ.
19 ರಂದು 6 ನೇ ವರ್ಷದ ಹರಿಹರ ಕಲ್ಲುಗಾಲಿ ಬ್ರಹ್ಮರಥೋತ್ಸವದ ಅಂಗವಾಗಿ ಅಭಿಷೇಕ, ರಥಾಂಗ ಹೋಮ, ಸಂಜೆ 4.35 ಕ್ಕೆ ಹರಿಹರ ಬ್ರಹ್ಮರಥೋತ್ಸವ ಮತ್ತು ಬಲಮುರಿ ಗಣಪತಿ, ಭದ್ರಕಾಳಿ ಸಮೇತ, ರುದ್ರದೇವರ ಬ್ರಹ್ಮರಥೋತ್ಸವ, ಧೂಳೋತ್ಸವ, ಅನ್ನಸಂತರ್ಪಣೆ ನಡೆಯಲಿದೆ ಎಂದರು.
ನಗರ್ತ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ ಮಾತನಾಡಿ, ನಗರ್ತ ಯುವಕ ಸಂಘದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ನಗರ್ತ ಜನಾಂಗದ ಎಲ್ಲ ಅಂಗ ಸಂಸ್ಥೆಗಳು ಸಹಕಾರ ನೀಡಬೇಕೆಂದು ಕೋರಿದರು.
ಸುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು. ಮುಖಂಡರಾದ ಮುರಳಿ, ಸಿ. ಭಾಸ್ಕರ್, ವಿ. ಬಸವರಾಜು, ಸುರೇಶ್ ಬಾಬು, ಬಸವರಾಜು, ಸುಮನ್ ಇದ್ದರು.