ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿಯಾದ ಸಂಪ್ರದಾಯ ಕಿರಿಕಿರಿ ನೀಡಿದೆ!’

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

1. ನನ್ನ ವಯಸ್ಸು 23. ನಾನು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದವಳು. ನಮ್ಮ ಮನೆಯಲ್ಲಿ ದೇವರನ್ನು ತುಂಬಾ ನಂಬುತ್ತಾರೆ. ಆದರೆ ನಾನು ಇತ್ತೀಚೆಗೆ ಮಾನಸಿಕ ಸಮಸ್ಯೆಯೊಂದರಿಂದ ಬಳಲುತ್ತಿದ್ದೇನೆ. ಅದೇನೆಂದರೆ ನಾನು ಯಾವಾಗಲೂ ದೇವರ ಬಗ್ಗೆ ಕೆಟ್ಟದಾಗಿ ಕಲ್ಪಿಸಿಕೊಳ್ಳುತ್ತಿರುತ್ತೇನೆ. ಅವ್ಯಾಚ ಶಬ್ದಗಳಿಂದ ದೇವರನ್ನು ನಿಂದಿಸುತ್ತೇನೆ. ದೇವರ ಪಟಗಳನ್ನು ನೋಡಿದಾಗ ಹರಿದು ಹಾಕಬೇಕು ಎಂದೆನಿಸುತ್ತದೆ. ಇದರಿಂದ ದೇವಾಲಯಗಳಿಗೆ ಹೋಗುವುದನ್ನು, ಪೂಜೆ ಮಾಡುವುದನ್ನು ಬಿಟ್ಟಿದ್ದೇನೆ.  ತುಂಬ ದುಃಖವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತದೆ. ಏನು ಮಾಡಲಿ?

ದೀಪಾ, ಊರು ಬೇಡ

ಸಾಂಪ್ರದಾಯಿಕ ಹಾಗೂ ಸಂಪ್ರದಾಯವಾದಿಗಳ ಕುಟುಂಬದಲ್ಲಿ ಬೆಳೆದವರಿಗೆ ಕೆಲವೊಮ್ಮೆ ಕುಟುಂಬದ ಸಂಪ್ರದಾಯಗಳನ್ನು ಪಾಲಿಸುವುದು ಕಷ್ಟವಾಗಬಹುದು. ಮನೆಯಲ್ಲಿನ ಅತಿಯಾದ ಸಂಪ್ರದಾಯದ ನಿಮ್ಮ ಮನಸ್ಸಿನ ಮಿತಿಯನ್ನು ಮೀರಿದೆ. ನಿಮ್ಮ ಮನೆಯಲ್ಲಿ ಪಾಲಿಸುವ ಸಂಪ್ರದಾಯದ ಆಚರಣೆಗಳನ್ನು ಅರೆಮನಸ್ಸಿನಿಂದಲೇ ಒಪ್ಪಿಕೊಂಡಿದ್ದೀರಿ. ನೀವು ಸಂಪ್ರದಾಯವನ್ನು ಪಾಲಿಸಲು ಇಷ್ಟಪಡದಿರಲು ಕಾರಣ, ಮನೆಯ ಹೊರಗಡೆ ಇರುವ ಉದಾರವಾದಿ ಪರಿಸರ ಮತ್ತು ಹೊರಗಿನವರು ಇದನ್ನು ಅತಿಯಾಗಿ ಪಾಲಿಸದೇ ಇರುವುದೂ ಇರಬಹುದು. ಮೊದಲು ನಿಮ್ಮೊಳಗೆ ನೀವೇ ಋಣಾತ್ಮಕವಾಗಿ ಮಾತನಾಡುವುದನ್ನು ನಿಲ್ಲಿಸಿ. ನೀವೇ ನಿಮ್ಮ ಸಮಸ್ಯೆಗಳನ್ನು ಗುರುತಿಸಿರುವುದು ಒಳ್ಳೆಯ ಲಕ್ಷಣ. ಅದುವೇ ಪರಿಹಾರದ ಕಡೆಗೆ ನಿಮ್ಮ ಮೊದಲ ಹೆಜ್ಜೆ. ಈಗ ನಿಮಗೆ ದೇವರು ಮತ್ತು ಸಂಪ್ರದಾಯದ ಬಗ್ಗೆ ಇರುವ ಭಾವನೆ ಹೇಗಿದೆಯೋ ಹಾಗೇ ಇರಲಿ. ಮನಃಪೂರ್ವಕವಾಗಿ ಎಲ್ಲವನ್ನೂ ನಿಜವಾಗಲೂ ಒಪ್ಪಿಕೊಳ್ಳುವವರೆಗೂ ಈ ಎಲ್ಲದರಿಂದ ದೂರವಿರಿ. ಅದರ ಜೊತೆಗೆ ಈ ಕೆಲವು ವಿಷಯಗಳನ್ನು ಪಾಲಿಸಿ: ನಿಮ್ಮ ಪ್ರಾಶಸ್ತ್ಯಗಳನ್ನು ಪಟ್ಟಿ ಮಾಡಿಕೊಳ್ಳಿ. ನೀವು ವಿದ್ಯಾರ್ಥಿಯಾಗಿದ್ದರೆ ಓದಿನ ಮೇಲೆ ಗಮನ ಕೊಡಿ. ನಿಮ್ಮ ಮನಸ್ಸು ಬದಲಾಗಲು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ವ್ಯಾಯಾಮವನ್ನೂ ಮಾಡಿ. ಧ್ಯಾನವನ್ನೂ ಅಭ್ಯಾಸ ಮಾಡಿ. ಇವೆಲ್ಲವೂ ನಿಮ್ಮನ್ನು ಶಾಂತವಾಗಿರಿಸುತ್ತದೆ. ಈ ಎಲ್ಲವನ್ನು ಮಾಡಿದ ಮೇಲೂ ಮನಸ್ಸಿನ ಋಣಾತ್ಮಕ ಯೋಚನೆಗಳು ಹಿಡಿತಕ್ಕೆ ಬರದಿದ್ದರೆ ಮನಃಶಾಸ್ತ್ರಜ್ಞರನ್ನು ಕಂಡು ನಿಮ್ಮ ಸಮಸ್ಯೆಗಳನ್ನು ವಿವರವಾಗಿ ಹೇಳಿ. ಅವರು ನಿಮಗೆ ಕೆಲವು ಸೂಚನೆಗಳ ಜೊತೆಗೆ ಔಷಧಗಳನ್ನೂ ನೀಡಬಹುದು.

2. ನನ್ನ ಅಣ್ಣ ನನ್ನನ್ನು ತುಂಬ ಪ್ರೀತಿಸುತ್ತಿದ್ದ. ನಾನು ಕೂಡ ಅಷ್ಟೇ. ಜಗತ್ತಿನಲ್ಲಿ ನಾನು ಅಣ್ಣನನ್ನು ಪ್ರೀತಿಸುವಷ್ಟು ಯಾರೂ ಪ್ರೀತಿಸಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ನನ್ನ ಅಣ್ಣನಿಗೆ ಮದುವೆ ನಿಶ್ಚಯ ಆಗಿದೆ. ಅಣ್ಣ ಈಗ ನನ್ನ ಬಳಿ ಅಷ್ಟಾಗಿ ಮಾತಾಡುತ್ತಿಲ್ಲ. ಅಣ್ಣ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎನ್ನಿಸುತ್ತಿದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ.

ಹೆಸರು, ಊರು ಬೇಡ

ಇದಕ್ಕೆ ನೀವು ನಿಮ್ಮ ಅಣ್ಣನ ಮೇಲೆ ಇರಿಸಿದ ಅತಿಯಾದ ‘ಪೊಸೆಸಿವ್’ ಅಂಶವೇ ಕಾರಣ. ಕೆಲವ ವರ್ಷಗಳು ಕಳೆದು ಪ್ರೌಢರಾದ ಮೇಲೆ ನೀವು ಅರ್ಥ ಮಾಡಿಕೊಳ್ಳಬೇಕು. ನೀವಿಬ್ಬರೂ ಭಿನ್ನ ರೀತಿಯ ಜೀವನವನ್ನು ಸಾಗಿಸಬೇಕಾಗಿದೆ; ಪ್ರಾಶಸ್ತ್ಯಗಳು, ಜೀವನ ದಾರಿಗಳು ಬದಲಾಗುತ್ತವೆ. ಇದು ಜೀವನದ ಅನಿವಾರ್ಯ ರೀತಿ. ನೀವು ಇದನ್ನು ಒಪ್ಪಿಕೊಳ್ಳಬೇಕು. ಇದರ ಅರ್ಥ ನಿಮ್ಮಿಬ್ಬರ ನಡುವಿನ ಪ್ರೀತಿ ಹಾಗೂ ಅಕ್ಕರೆ ಕಡಿಮೆಯಾಗುತ್ತದೆ ಎಂಬ ಅರ್ಥವಲ್ಲ. ಒಂದರ್ಥದಲ್ಲಿ ಅವರಿಗೆ ಜವಾಬ್ದಾರಿ ಹೆಚ್ಚುತ್ತದೆ. ನೀವು ಈಗ ಅವರಿಗೆ ಸಹಕಾರವನ್ನು ನೀಡಿ. ಅತ್ತಿಗೆಯಾಗುವವಳು ನಿಮಗೆ ಒಬ್ಬ ಒಳ್ಳೆಯ ಸ್ನೇಹಿತೆಯೂ ಆಗಬಹುದು. ಹಾಗಾಗಿ ಈ ಸುಂದರ ಬದಲಾವಣೆಯನ್ನು ಒಪ್ಪಿಕೊಳ್ಳಿ. ನಿಮ್ಮ ಮನೆಯ ಹೊಸ ಅತಿಥಿಯನ್ನು ಪ್ರೀತಿಯ ಹಂದರದೊಂದಿಗೆ, ವಿಶ್ವಾಸದೊಂದಿಗೆ, ಕಾಳಜಿಯೊಂದಿಗೆ ಒಪ್ಪಿಕೊಂಡು ಬರಮಾಡಿಕೊಳ್ಳಿ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT