ವಿಜಯಪುರ: ಧರ್ಮರಾಯಸ್ವಾಮಿ ದ್ರೌಪತಮ್ಮನವರ 80 ನೇ ವರ್ಷದ ಹೂವಿನ ಕರಗ ಮಹೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ನಗರದ ಧರ್ಮರಾಯಸ್ವಾಮಿ ದೇವಾಲಯದಿಂದ ಪೂಜೆ ಸಲ್ಲಿಸುವ ಮೂಲಕ ಕರಗದ ಪೂಜಾರಿ ಕಂಕುಳಲ್ಲಿ ಹಸಿಕರಗವನ್ನು ಹೊತ್ತು ತಮಟೆ ವಾದನಗಳು, ಮಂಗಳವಾದ್ಯಗಳೊಂದಿಗೆ ನರ್ತನ ಮಾಡುತ್ತಾ ಕರಗ ಸಾಗಿತು.
ಹಸಿಕರಗಕ್ಕೆ ಮಲ್ಲಿಗೆ ಹೂಗಳನ್ನು ಎಸೆಯುತ್ತಾ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿಗಳನ್ನು ಹಿಡಿದು ಕೆಂಪು ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿಕೊಂಡು, ಮೈಮೇಲೆ ಮಲ್ಲಿಗೆ ಹೂವಿನ ಹಾರಗಳನ್ನು ಧರಿಸಿಕೊಂಡು ಕರಗವನ್ನು ಹಿಂಬಾಲಿಸಿದರು.
ಕರಗದ ಪೂಜಾ, ಎಡಗಡೆಯ ಕಂಕುಳಲ್ಲಿ ಕರಗವನ್ನು ಹೊತ್ತುಕೊಂಡು ಬಲಗೈಯಲ್ಲಿ ಕತ್ತಿ ಮಾದರಿಯ ಆಯುಧವನ್ನು ಹಿಡಿದು ಮಾಡಿದ ನರ್ತನ ಎಲ್ಲರ ಗಮನಸೆಳೆಯಿತು.
ಧರ್ಮರಾಯಸ್ವಾಮಿ ದೇವಾಲಯಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೀದಿಯ ಉದ್ದಕ್ಕೂ ಮಾಡಲಾಗಿದ್ದ ದೀಪಾಲಂಕಾರ ಎಲ್ಲರ ಗಮನ ಸೆಳೆಯಿತು.