ದೊಡ್ಡಬಳ್ಳಾಪುರ: 2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಘೋಷಣೆ ಬಳಿಕ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಜಂಟಿ ಮುಖ್ಯ ಚುನಾವಣಾಧಿಕಾರಿ ಟಿ. ಯೋಗೇಶ್ ಮಂಗಳವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ರಾಜ್ಯದ ಎಲ್ಲ ಜಿಲ್ಲೆಯ ಚುನಾವಣಾ ಅಧಿಕಾರಿಗಳಿಗೆ ತುರ್ತು ಸಂದೇಶ ಕಳಿಸಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತ್ತಿದೆ.
ಈ ಪತ್ರದಲ್ಲಿನ ಸಂದೇಶದ ಅನ್ವಯ ರಾಜ್ಯ ವಿಧಾನಸಬೆ ಚುನಾವಣೆಯು ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿದೆ. ಭಾರತದ ಚುನಾವಣಾ ಆಯೋಗವು ಯಾವುದೇ ಸಮಯದಲ್ಲಿ ಚುನಾವಣೆ ಘೋಷಣೆ ಮಾಡಬಹುದು ಮತ್ತು ಚುನಾವಣೆಗಳ ಘೋಷಣೆ ಮೊದಲು ಹಲವು ಪ್ರಮುಖ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಸೂಚಿಸಿದ್ದಾರೆ.
ಆರು ಚೆಕ್ ಪೋಸ್ಟ್: ಚುನಾವಣಾಧಿಕಾರಿಗಳ ಪತ್ರದ ಸೂಚನೆ ಬೆನ್ನಲ್ಲೇ ಚುನಾವಣೆ ಪ್ರಕ್ರಿಯೆ ತೀವ್ರಗೊಳಿಸಿರುವ ಅಧಿಕಾರಿಗಳು ತಾಲ್ಲೂಕಿನ ಆರು ಸ್ಥಳಗಳಲ್ಲಿ ಆಧುನಿಕ ಶೈಲಿಯ ಸುಸಜ್ಜಿತ ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ.
ಬೆಂಗಳೂರಿನಿಂದ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಹೊಸಹುಡ್ಯ ಕ್ರಾಸ್, ತುಮಕೂರು ಕಡೆಯಿಂದ ಬರುವ ರಾಷ್ಟ್ರೀಯ ಹೆದ್ದಾರಿ ಚಿಕ್ಕಬೆಳವಂಗಲ ಶಾಲೆ ಸಮೀಪದ ಆರೂಢಿ, ನೆಲಮಂಗಲ ಮುಖ್ಯರಸ್ತೆಯ ಕನಸವಾಡಿ, ದೊಡ್ಡಬಳ್ಳಾಪುರ ನಗರಕ್ಕೆ ಪ್ರವೇಶ ಮಾಡುವ ಕನಕದಾಸ ವೃತ್ತದದಲ್ಲಿ ಹಾಗೂ ಚಿಕ್ಕಬಳ್ಳಾಪುರ ರಸ್ತೆಯ ರಾಜಘಟ್ಟ ಗ್ರಾಮದಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಹಿಂದಿನ ಚುನಾವಣೆ ವೇಳೆ ತಪಾಸಣೆ ಕೇಂದ್ರಗಳನ್ನು ಶ್ಯಾಮಿಯಾನದಿಂದ ನಿರ್ಮಿಸಲಾಗುತ್ತಿತ್ತು. 24X7 ತಪಾಸಣೆ ನಡೆಸುವ ಅಧಿಕಾರಿಗಳು ಮಳೆ, ಗಾಳಿಗೆ ತೊಂದರೆಗೆ ಒಳಗಾಗುತ್ತಿದ್ದರು. ಈ ಬಾರಿ ಆಧುನಿಕ ಶೈಲಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ವಿದ್ಯುತ್ ಪೂರೈಕೆ, ರಾತ್ರಿ ವೇಳೆ ತಪಾಸಣೆಗೆ ಅನುಕೂಲವಾಗುವಂತೆ ಎರಡೂ ಬದಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ತಪಾಸಣಾ ಕೇಂದ್ರಗಳಲ್ಲಿ ಇನ್ನೂ ಪೊಲೀಸ್ ಸೇರಿದಂತೆ ಇತರೆ ಸಿಬ್ಬಂದಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ತಪಾಸಣಾ ಕೇಂದ್ರಗಳ ಸಮೀಪ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ನಡೆಯುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.