ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ನೆರಳೂರು ಬಳಿ ಗುರುವಾರ ಮುಂಜಾನೆಆಂಬುಲೆನ್ಸ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ರೋಗಿ, ವೈದ್ಯ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರ ಮೂಲದ ನಾಸಿಕ್ನ ಡಾ.ಜಾಧವ್ ಅಶೋಕ್(35), ಚೆನ್ನೈ ಮೂಲದ ಅನ್ವರ್ ಖಾನ್(68) ಮತ್ತು ಆಂಬುಲೆನ್ಸ್ ಸಹ ಚಾಲಕ ಬಬಿಯಾ(40) ಮೃತಪಟ್ಟವರು.
ಚೆನ್ನೈನ ಅನ್ವರ್ ಖಾನ್ ಎಂಬುವರು ಪಾರ್ಶ್ವವಾಯು ಪೀಡಿತರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಲ್ಯಾಣ್ನಿಂದ ಚೆನ್ನೈಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅತ್ತಿಬೆಲೆ ಸಮೀಪದ ನೆರಳೂರು ಬಳಿ ಆಂಬುಲೆನ್ಸ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ವೈದ್ಯ ಡಾ.ಜೀತೇಂದ್ರ ಬಿರಾದಾರ್, ರೋಗಿಯ ಸಹೋದರ ಯುಸೂಫ್ ಖಾನ್, ಅಹ್ಮದ್ ರಾಜ್ಶೇಖ್ ಮತ್ತು ಆಂಬುಲೆನ್ಸ್ ಚಾಲಕ ಆಸ್ಕನ್ ಮೆನನ್ ಎಂಬುವರು ಗಾಯಗೊಂಡಿದ್ದಾರೆ.
ಆಂಬುಲೆನ್ಸ್ ಚಾಲಕ ಲಾರಿಯನ್ನು ಹಿಂದಿಕ್ಕಿ ಮುಂದೆ ತೆರಳುವ ವೇಳೆಯಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದರು.