ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ತಾಲ್ಲೂಕಿನ ಜಡಗೇನಹಳ್ಳಿ ಹೋಬಳಿಯ ಕಾಚರನಹಳ್ಳಿಯಲ್ಲಿ ಗುರುವಾರ ತಾತ್ಕಾಲಿಕ ಶೆಡ್ ಮೇಲೆ ಹೂಡಾನ್ ಕಂಪನಿಗೆ ಸೇರಿದ ಗೋದಾಮಿನ ತಡೆಗೋಡೆ ಕುಸಿದು ಬಿಹಾರ ಮೂಲದ ನಾಲ್ವರು ಕಟ್ಟಡ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೋಜ್ ಕುಮಾರ್ ಸದಯ್ (35), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ (22) ಮತ್ತು ಮಣಿತನ್ ದಾಸ್ (28) ಮೃತಪಟ್ಟವರು.
ಸುನಿಲ್ ಮಂಡಲ್ (25), ಶಂಭು ಮಂಡಲ್ (28), ದಿಲೀಪ್ (24) ಹಾಗೂ ದುರ್ಗೇಶ್(29) ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕಾರ್ಮಿಕರು ಹೂಡಾನ್ ಗೋದಾಮಿನ ಪಕ್ಕದಲ್ಲಿರುವ ನಿರ್ಮಾಣ ಹಂತದ ಸೌಪರ್ಣಿಕಾ ವಸತಿ ಸಮುಚ್ಚ ಯದಲ್ಲಿ ಕೆಲಸ ಮಾಡುತ್ತಿದ್ದರು. ಊಟ ಮುಗಿಸಿ ರಾತ್ರಿ ಶೆಡ್ನಲ್ಲಿ ಮಲಗಿದ್ದರು.ಬೆಳಗಿನ ಜಾವ ಸುಮಾರು 3 ಗಂಟೆಗೆ ತಡೆಗೋಡೆ ಕುಸಿದು ಬಿದ್ದಿದೆ.
ಈ ಕಾರ್ಮಿಕರು ನಾಲ್ಕು ದಿನಗಳ ಹಿಂದೆಯಷ್ಟೇ ಬಿಹಾರದಿಂದ ಕೆಲಸಕ್ಕೆ ಬಂದಿದ್ದರು. ಇವರು ಕಾರ್ಮಿಕ ಇಲಾಖೆ ಯಲ್ಲಿ ನೋಂದಣಿ ಮಾಡಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಸತಿ ಸಮುಚ್ಚಯದ ಗುತ್ತಿಗೆದಾರ ಮತ್ತು ಹೂಡಾನ್ ಕಂಪನಿ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.