ಹೊಸಕೋಟೆ: ಊರಿನ ಯಾವುದೇ ಭಿನ್ನಾಭಿಪ್ರಾಯ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಯಾವುದೇ ಜಾತಿ ಅಥವಾ ರಾಜಕೀಯ ಬೆರಸಬಾರದು ಎಂದು ವಾಲ್ಮೀಕಿ ಯುವಪಡೆ ತಾಲ್ಲೂಕು ಅಧ್ಯಕ್ಷ ವಾಲೆ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಈಚೆಗೆ ಕಸಬಾ ಹೋಬಳಿ ದಾಸರಹಳ್ಳಿಯಲ್ಲಿ ನಡೆದ ನಾಯಕ ಸಮುದಾಯಯದ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು. ಹಲ್ಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಊರಿನಲ್ಲಿ ನೂರಾರು ವರ್ಷಗಳಿಂದಲೂ ತಿಗಳ ಸಮಾಜ ಹಾಗೂ ನಾಯಕ ಸಮಾಜ ಒಂದೇ ಮನೆಯವರಂತೆ ಜೀವನ ಸಾಗಿಸುತ್ತಿದ್ದರು. ಈಗ ದೇವಸ್ಥಾನ ಜಾಗದಲ್ಲಿ ಅಶ್ವಥ್ ಒತ್ತುವರಿ ಮಾಡಿಕೊಂಡು ಮನೆ ಕಟ್ಟುತ್ತಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕೆಲವರು ಉದ್ದೇಶಪೂರ್ವಕವಾಗಿ ಜಾತಿಗಳ ನಡುವೆ ಬಿರುಕು ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಈ ವಿಷಯದಲ್ಲಿ ಸಚಿವರಾದ ಎಂ.ಟಿ.ಬಿ ನಾಗರಾಜ್ ಮತ್ತು ನಗರ ಬಿಜೆಪಿ ನಗರ ಘಟಕದ ಅಧ್ಯಕ್ಷ ಜಯರಾಜ್ ಹೆಸರು ತಂದು ಅಪಮಾನ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಜಾತಿ ನಿಂದನೆ ಕಾನೂನು ದುರುಪಯೋಗ: ಈಚೆಗೆ ಎಲ್ಲ ಪ್ರಕರಣಗಳಲ್ಲಿಯೂ ಕೆಲವರು ಜಾತಿ ನಿಂದನೆ ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವೀರ ಮದಕರಿ ನಾಯಕ ಸಂಘದ ಅಧ್ಯಕ್ಷ ಮುರಳಿ, ವಿನಯ್, ಮುಕುಂದ, ನವೀನ್ ಕುಮಾರ್ ಇದ್ದರು.