ವಿಜಯಪುರ(ಬೆಂ.ಗ್ರಾಮಾಂತರ): ಚನ್ನರಾಯಪಟ್ಟಣ ಹೋಬಳಿಯ ಮಟ್ಟಬಾರ್ಲು ಗ್ರಾಮದ ಸರ್ವೆ ನಂ. 11ರಲ್ಲಿ ಸರ್ಕಾರಿ ಕುಂಟೆಗೆ ಹೋಗುವ ರಾಜಕಾಲುವೆಯ ಒತ್ತುವರಿಯನ್ನು ತೆರವು ಮಾಡಲಾಗಿದೆ ಎಂದು ತಹಶೀಲ್ದಾರ್ ಶಿವರಾಜ್ ಹೇಳಿದರು.
ರಾಜಕಾಲುವೆಗಳು ಒತ್ತುವರಿಯಾಗಿರುವ ಕಾರಣ ಇತ್ತೀಚೆಗೆ ಬಿದ್ದ ಮಳೆಯಿಂದ ನೀರು ಹಳ್ಳಿಗಳ ಕಡೆಗೆ ಹರಿದಿದ್ದು, ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿವೆ. ಹಲವಾರು ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಈ ಕಾರಣದಿಂದ ಸರ್ವೆ ನಡೆಸಿ ಎಲ್ಲೆಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿವೆಯೋ ಅಂತಹ ಕಾಲುವೆಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ಸಮಯದಲ್ಲಿ ಮಳೆಯಾದರೂ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ರಾಜಸ್ವ ನಿರೀಕ್ಷಕರಾದ ರಾಜು ಸೆಬಾಸ್ಟಿನ್, ಹೋಬಳಿಯ ಉಪ ತಹಶೀಲ್ದಾರ್ ಸುರೇಶ್, ಗ್ರಾಮ ಲೆಕ್ಕಾಧಿಕಾರಿ ಲೋಕೇಶ್, ಗ್ರಾಮ ಸಹಾಯಕ ಶ್ರೀನಿವಾಸ್, ತಾಲ್ಲೂಕು ಭೂಮಾಪಕ ಮಂಜುನಾಥ್ ಹಾಜರಿದ್ದರು.