ಹೊಸಕೋಟೆ: ‘ಕೊರೊನಾ ಸೋಂಕಿನ ಪರಿಣಾಮ ಖಾಸಗಿ ಶಾಲೆಗಳ ಶುಲ್ಕ ಭರಿಸಲಾಗದೆ ಮತ್ತು ಆನ್ಲೈನ್ ಕ್ಲಾಸ್ ಸಮಸ್ಯೆಯಿಂದ ಸಾಮಾನ್ಯ ಜನರು ಈಗ ಸರ್ಕಾರಿ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ, ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ’ ಎಂದು ಶಾಸಕಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ನಗರದ ಗೌತಮ್ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತೋಷಿಮಾ ಪಂಪ್ಸೆಟ್ ಕಂಪನಿಯವರು ತಮ್ಮ ಸಿಎಸ್ಆರ್ ಹಣದಲ್ಲಿ ಕಟ್ಟಡ ನಿರ್ಮಾಣಕ್ಕೆ ₹ 25 ಲಕ್ಷ ಅನುದಾನ ನೀಡಿದ್ದಾರೆ ಎಂದರು.
ಈಗಿನ ಕಾಲದಲ್ಲಿ ಮೂಲ ಸೌಕರ್ಯವೇ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ನಡುವೆ ಇರುವ ಸಾಮಾನ್ಯ ವ್ಯತ್ಯಾಸ. ಖಾಸಗಿಯವರ ಸಹಭಾಗಿತ್ವದಡಿ ಮೂಲಸೌಕರ್ಯ ಕಲ್ಪಿಸಿದರೆ ಸರ್ಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ಪ್ರವೇಶಾತಿ ಪಡೆಯುತ್ತಾರೆ ಎಂದು ಹೇಳಿದರು.
ಈ ಮೊದಲು ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಶಾಲೆಯಲ್ಲಿ ಓದಿದ ಹಲವರು ನಮ್ಮ ಕಾರ್ಯಕರ್ತರಾಗಿರುವುದು ಹೆಮ್ಮೆ ತಂದಿದೆ. ಈಗ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದರು.